ನವದೆಹಲಿ: ಐಎಂಎ ಪ್ರಕರಣ ರಾಜ್ಯದ ಅತೀ ದೊಡ್ಡ ಹಗರಣ ಅಂತಾ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಐಎಂಎ ವಿರುದ್ಧ 43,000ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಈಗಾಗಲೇ ಇಬ್ಬರು ಸಾವನ್ನಪ್ಪಿದ್ದಾರೆ. ಆರೋಪಿ ಮನ್ಸೂರ್ ಅಲಿ ಖಾನ್ ವಿಡಿಯೋ ಬಿಡುಗಡೆ ಮಾಡಿದ್ದಾನೆ. ಇದರಲ್ಲಿ ಹಲವು ರಾಜಕಾರಣಿಗಳು ಹಾಗೂ ಅಧಿಕಾರಿಗಳು ಭಾಗಿಯಾಗಿರುವ ಬಗ್ಗೆ ಉಲ್ಲೇಖಿಸಿದ್ದಾರೆ ಅಂತಾ ಹೇಳಿದ್ದಾರೆ.
ಐಎಂಎ ಪ್ರಕರಣದಲ್ಲಿ ರಾಜ್ಯ ಸರ್ಕಾರ ಶಾಮೀಲಾಗಿದೆ ಅಂತಾ ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. ಹೀಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿದ್ದೇವೆ. ಸಿಬಿಐ ಮತ್ತು ಇಡಿಗೆ ಈ ಪ್ರಕರಣವನ್ನ ವಹಿಸುವಂತೆ ಮನವಿ ಮಾಡಿದ್ದೇವೆ ಅಂತಾ ತಿಳಿಸಿದ್ದಾರೆ.
ಸಂಸತ್ ಮೂಲಕವೂ ನಾನು ಸರ್ಕಾರಕ್ಕೆ ಮನವಿ ಮಾಡಿದೆ. ಪ್ರಕರಣದ ಸತ್ಯ ಹಾಗೂ ಭಾಗಿಯಾಗಿರುವ ಎಲ್ಲರ ಹೆಸರು ಹೊರ ಬರಬೇಕು. ಜಮೀರ್ ಖಾನ್, ರೈಮಾನಖಾನ್, ರೋಷನ್ ಬೇಗ್ ಹೆಸರು ಕೇಳಿ ಬಂದಿದೆ. ಆರ್ ಬಿಐ ಎಚ್ಚರಿಕೆ ಬಳಿಕವೂ ಹಲವು ರಾಜಕಾರಣಿ ಹಾಗೂ ಅಧಿಕಾರಿಗಳು ಬಿರಿಯಾನಿ ತಿಂದಿದ್ದಾರೆ ಅಂತಾ ಹೇಳಿದ ಅವರು, ರಾಜ್ಯ ಸರ್ಕಾರ ಶಾಮೀಲಾಗಿರುವುದು ಇಲ್ಲಿ ಸ್ಪಷ್ಟವಾಗಿದೆ ಅಂತಾ ಆರೋಪಿಸಿದ್ದಾರೆ. ಎಸ್ಐಟಿ ಮೇಲೆ ಜನರಿಗೆ ನಂಬಿಕೆ ಇಲ್ಲ. ಮನ್ಸೂರ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸಲು ನೋಟಿಸ್ ನೀಡುವಂತೆ ಒತ್ತಾಯಿಸಿದೆ ಅಂತಾ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.