ಪ್ರಜಾಸ್ತ್ರ ಸುದ್ದಿ
ನವದೆಹಲಿ: 2023ರ ವಿಧಾನಸಭಾ ಚುನಾವಣೆಯಲ್ಲಿ ಮುನಿಸಿಕೊಂಡು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಜಗದೀಶ್ ಶೆಟ್ಟರ್ ಇಂದು ವಾಪಸ್ ಬಿಜೆಪಿ ಸೇರ್ಪಡೆಯಾಗಿದ್ದಾರೆ. ದೆಹಲಿಯಲ್ಲಿನ ಪಕ್ಷದ ಪ್ರಧಾನ ಕಾರ್ಯದರ್ಶಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿಗೆ ಮರಳಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ, ಕೇಂದ್ರ ಸಚಿವ ರಾಜೀವ ಚಂದ್ರಶೇಖರ್ ಹಾಗೂ ಇತರರ ಸಮ್ಮುಖದಲ್ಲಿ ಮರಳಿ ಬಿಜೆಪಿಗೆ ಬಂದಿದ್ದಾರೆ. ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಅಮಿತ್ ಶಾ ಅವರನ್ನು ಬೆಳಗ್ಗೆ ಭೇಟಿ ಮಾಡಿ ಚರ್ಚೆ ಮಾಡಿ ಯಾವುದೇ ಅಪೇಕ್ಷೆ ಇಲ್ಲದೆ ಪಕ್ಷ ಸೇರುವುದಾಗಿ ಹೇಳಿದರು. ಹೀಗಾಗಿ ತುಂಬಾ ಸಂತೋಷವಾಗಿದೆ ಎಂದರು.
ಜಗದೀಶ್ ಶೆಟ್ಟರ್ ಹಿಂದೆ ಮುಖ್ಯಮಂತ್ರಿಯಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಪಕ್ಷದ ಕಾರ್ಯಕರ್ತರು ಅಪೇಕ್ಷೆ ಸಹ ವಾಪಸ್ ಪಕ್ಷಕ್ಕೆ ಬರಬೇಕು ಎನ್ನುವುದಾಗಿತ್ತು. ಜಗದೀಶ್ ಶೆಟ್ಟರ್ ವಾಪಸ್ ಪಕ್ಷಕ್ಕೆ ಬಂದಿದ್ದಕ್ಕೆ ಶಕ್ತಿ ಬಂದಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ 25ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.
ಇವತ್ತು ತುಂಬಾ ಸಂತೋಷದ ಸಂಗತಿ. ವಿಧಾನಸಭಾ ಚುನಾವಣೆಯಲ್ಲಿ ನಾನು ಬಿಜೆಪಿಗೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಸೇರ್ಪಡೆಯಾದ ದಿನದಿಂದ ಹಿಡಿದು ಇಲ್ಲಿಯ ತನಕ, ರಾಜ್ಯದ ಪ್ರತಿಯೊಂದು ಭಾಗದ ನಾಯಕರು, ಮುಖಂಡರು, ಕಾರ್ಯಕರ್ತರ, ರಾಷ್ಟ್ರೀಯ ನಾಯಕರು ನಾನು ವಾಪಸ್ ಬರಬೇಕು ಎನ್ನುವ ಅಪೇಕ್ಷೆಯಿತ್ತು. ನಾನು ಕಾಂಗ್ರೆಸ್ ಪರಿಷತ್ ಸ್ಥಾನಕ್ಕೆ ರಾಜೀನಾಮೆಯನ್ನು ಇ ಮೇಲೆ ಸಭಾಪತಿ ಹೊರಟ್ಟಿಯವರಿಗೆ ಸಲ್ಲಿಸಿದ್ದೇನೆ. ಫೋನ್ ಮಾಡಿ ಸಹ ಹೇಳಿದ್ದೇನೆ. ಪಕ್ಷ ನೀಡುವ ಜವಾಬ್ದಾರಿಯನ್ನು ನಿಭಾಯಿಸುತ್ತೇನೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.
ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಜಗದೀಶ್ ಶೆಟ್ಟರ್ ವಾಪಸ್ ಬಿಜೆಪಿ ಸೇರಲ್ಲ. ಅಲ್ಲಿ ಅವರಿಗೆ ಅವಮಾನವಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಸ್ಪಷ್ಟತೆಯಿದೆ ಇದೆ ಎಂದಿದ್ದರು. ಈಗ ಅದೆಲ್ಲವೂ ಉಲ್ಟಾ ಆಗಿದೆ.