ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಅವರೇ ಸ್ವತಃ ನಿಗಮದ ಕಲಾಕೃತಿಗಳನ್ನು, ಶಾಲುಗಳನ್ನು ಹಣ ಕೊಡದೆ ಅನಾಮತ್ತಾಗಿ ಎತ್ತಿಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ನೋಟಿಸ್ ಕೊಡಲಾಗಿದೆ.
ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿರುವ ಡಿ.ರೂಪಾ ಮೌದ್ಗಿಲ್, ನೋಟಿಸ್ ನೀಡಿದ್ದಾರೆ. 2020ರಿಂದ ತೆಗೆದುಕೊಂಡು ಹೋದ ವಸ್ತುಗಳಿಗೆ ಹಣವನ್ನೇ ನೀಡಿಲ್ಲ. ಈ ಬಗ್ಗೆ ಮೌಖಿಕವಾಗಿ ಹಲವಾರು ಬಾರಿ ಹೇಳಿದರು ಹಣ ಪಾವತಿಸಿಲ್ಲ. ಕೂಡಲೇ ಹಣ ಪಾವತಿಸಬೇಕು ಎಂದು ನೋಟಿಸ್ ನೀಡಲಾಗಿದೆ.
ಶ್ರೀಗಂಧದ ಮಣಿಪುಷ್ಪ ಹಾರ, ಶ್ರೀಗಂಧದ ಕೃಷ್ಣ ವಿಗ್ರಹ, ಶ್ರೀಗಂಧದ ರಾಮ ವಿಗ್ರಹ, ಶಿವಾನಿ ವುಡ್ ರಾಮ್ ವಿಗ್ರಹ ಹಾಗೂ ಶಾಲುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಇವುಗಳ ಒಟ್ಟು ಮೊತ್ತ 3 ಲಕ್ಷ 10 ಸಾವಿರದ 166 ರೂಪಾಯಿ. ಇದನ್ನು ಇದುವರೆಗೂ ಪಾವತಿಸಿಲ್ಲವೆಂದು ನೋಟಿಸ್ ನೀಡಲಾಗಿದೆ. ಇದರ ಜೊತೆಗೆ ನಿಗಮದ ನೋಂದಾಯಿತ ಕರಕುಶಲ ಕರ್ಮಿಗಳು ಹಾಗೂ ಮಾರಾಟಗಾರರಿಂದ ಹಣ ಪಾವತಿಸದೆ ಅನೇಕ ಕಲಾಕೃತಿಗಳನ್ನು ತೆಗೆದುಕೊಂಡು ಹೋಗಿದ್ದಾರೆ ಅನ್ನೋ ಆರೋಪ ಸಹ ಕೇಳಿ ಬಂದಿದೆ.