ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ-2023ರ ಸಂಬಂಧ ಕಾಂಗ್ರೆಸ್, ಜೆಡಿಎಸ್, ಕೆಆರ್ ಎಸ್, ಆಪ್ ಪಕ್ಷಗಳು ಈಗಾಗ್ಲೇ ಬಹುತೇಕ ಕಡೆ ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡಿವೆ. ಆದರೆ, ಆಡಳಿತರೂಢ ಪಕ್ಷ ಬಿಜೆಪಿ ಮಾತ್ರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ತಡ ಮಾಡುತ್ತಿದ್ದು, ಆಕಾಂಕ್ಷಿಗಳಲ್ಲಿ ಟೆನ್ಷನ್ ಹೆಚ್ಚಾಗಿದೆ. ಇಂದು ಸಂಜೆ ಅಥವ ಸೋಮವಾರ ಮುಂಜಾನೆ ಬಿಜೆಪಿ ಮೊದಲ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿದೆ.
ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗುತ್ತಿದೆ. ಆದರೆ, 224 ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮೊದಲ ಪಟ್ಟಿಯನ್ನು ಸಹ ಬಿಜೆಪಿ ಬಿಡುಗಡೆ ಮಾಡಿಲ್ಲ. ದೆಹಲಿಯ ಕೋರ್ ಕಮಿಟಿಯ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯುತ್ತಿದೆ. ಹಾಲಿ ಶಾಸಕರ ಜೊತೆಗೆ ಹೊಸಬರಿಗೆ ಹಾಗೂ ಮಾಜಿ ಶಾಸಕರಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಅನ್ನೋ ಚರ್ಚೆ ನಡೆದಿದೆ.
ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ದೊಡ್ಡ ಮಟ್ಟದಲ್ಲಿದೆ. ಬಿಜೆಪಿ ಸರ್ಕಾರದ ವಿರುದ್ಧ ಜನರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಹೀಗಾಗಿ ಹಾಲಿ ಶಾಸಕರಲ್ಲಿ ಯಾರ ವಿರುದ್ಧ ದೊಡ್ಡ ಮಟ್ಟದಲ್ಲಿ ವಿರೋಧವಿದೆ, ಅಲ್ಲಿ ಯಾರಿಗೆ ಟಿಕೆಟ್ ನೀಡಬೇಕು, ಟಿಕೆಟ್ ಘೋಷಣೆ ಬಳಿಕ ಎದುರಾಗುವ ಬಂಡಾಯವನ್ನು ಶಮನ ಮಾಡುವುದು ಹೇಗೆ ಅನ್ನೋದು ಸೇರಿ ಎಲ್ಲ ರೀತಿಯ ಲೆಕ್ಕಾಚಾರ ನಡೆಸುತ್ತಿದೆ. ಟಿಕೆಟ್ ಘೋಷಣೆ ತಡ ಮಾಡಿದಷ್ಟು ಬಿಜೆಪಿ ಅನುಕೂಲವೇ ಅಥವ ನಷ್ಟವೇ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.