ಮಡಿಕೇರಿ: ಇಂದು ಮಧ್ಯರಾತ್ರಿ 12.59ಕ್ಕೆ ಕರ್ಕಾಟಕ ಲಗ್ನದಲ್ಲಿ ಕಾವೇರಿ ತೀರ್ಥೋದ್ಭವ ನಡೆಯಲಿದೆ. ಇದನ್ನ ನೋಡಲು ರಾಜ್ಯದ ಜನತೆ ಸೇರಿದಂತೆ ತಮಿಳುನಾಡು, ಆಂಧ್ರ ಹಾಗೂ ಕೇರಳದಿಂದ ಸಹ ಭಕ್ತರು ಬರ್ತಾರೆ. ಶುಕ್ರವಾರ ಬೆಳ್ಳಂಬೆಳಗ್ಗೆ 12.59ಕ್ಕೆ ತೀರ್ಥರೂಪಿಣಿಯಾಗಿ ದರ್ಶನ ನೀಡಲಿದ್ದಾಳೆ.
ಕವೇರನ ಮಾನಸ ಪುತ್ರಿ ಕಾವೇರಿಯಾದ್ಳು
ತಲಕಾವೇರಿ ಹತ್ತಿರದ ಬ್ರಹ್ಮಗಿರಿ ಬೆಟ್ಟದಲ್ಲಿ ಕವೇರ ಅನ್ನೋ ಮುನಿ ವಾಸವಾಗಿದ್ದ. ಅವನಿಗೆ ಮಗಳೊಬ್ಬಳು ಬೇಕು ಅನ್ನೋ ಆಸೆಯಾಯ್ತು. ಬ್ರಹ್ಮನನ್ನ ಕುರಿತು ತಪಸ್ಸು ಮಾಡಿದಾಗ, ತಪಸ್ಸಿಗೆ ಮೆಚ್ಚಿದ ಬ್ರಹ್ಮ ತನ್ನ ಮಾನಸಪುತ್ರಿ ಲೋಪಾಮುದ್ರೆಯನ್ನ ದತ್ತು ಮಗಳಾಗಿ ನೀಡಿದ. ಲೋಪಮುದ್ರೆ ಕವೇರನ ಆಶ್ರಮದಲ್ಲಿ ಬೆಳೆದ್ಳು. ಇದ್ರಿಂದಾಗಿ ಮುಂದೆ ಕಾವೇರಿ ಆದ್ಳು ಅನ್ನೋದು ಸ್ಕಂದ ಪುರಾಣದಲ್ಲಿ ಹೇಳಲಾಗುತ್ತೆ.
ಕಾವೇರಿಗೆ ಮನಸೋತ ಅಗಸ್ತ್ಯ ಮುನಿ
ಅಗಸ್ತ್ಯ ಮುನಿ ಒಂದು ದಿನ ಕವೇರನ ಆಶ್ರಮಕ್ಕೆ ಬರ್ತಾನೆ. ಅಲ್ಲಿ ಕಾವೇರಿಯನ್ನ ನೋಡಿದ ಅಗಸ್ತ್ಯ ಮುನಿ ಮನಸೋತು ಆಕೆಯ ವಿವಾಹಕ್ಕೆ ಮುಂದಾಗ್ತಾನೆ. ಇದಕ್ಕೆ ಒಪ್ಪಿದ ಕವೇರ ಮುನಿ ಅಗಸ್ತ್ಯ ಮುನಿಗಳೊಂದಿಗೆ ಮಾನಸ ಪುತ್ರಿಯನ್ನ ಕಲ್ಯಾಣ ಮಾಡಿ ಕೊಡ್ತಾರೆ. ಈ ಮದ್ವೆ ವೇಳೆ ಕಾವೇರಿ ಅಗಸ್ತ್ಯ ಮುನಿಗಳಿಗೆ ಷರತ್ತು ವಿಧಿಸಿ ಇರ್ತಾಳೆ. ನೀವು ಸದಾ ನನ್ನೊಂದಿಗೆ ಇರಬೇಕು. ಅರ್ಧದಲ್ಲಿ ಬಿಟ್ಟು ಹೋಗಬಾರದು. ಒಂದು ವೇಳೆ ಹಾಗಾದ್ರೆ ನಾನು ನದಿಯಾಗಿ ಹರಿಯುತ್ತೇನೆ ಎಂದು ಹೇಳುತ್ತಾಳೆ. ಇದಕ್ಕೆ ಅಗಸ್ತ್ಯ ಮುನಿ ಒಪ್ಪಿಕೊಂಡು ವಿವಾಹವಾಗ್ತಾನೆ.
ಸ್ನಾನಕ್ಕೆ ಹೋದ ಅಗಸ್ತ್ಯ ಮುನಿ.. ಗುಪ್ತಗಾಮಿನಿ ಆದ ಕಾವೇರಿ
ಕಾವೇರಿಗೆ ಕೊಟ್ಟ ಮಾತಿನಂತೆ ಅಗಸ್ತ್ಯ ಮುನಿಗಳು ಆಶ್ರಮದಲ್ಲಿ ಸುಖದಿಂದ ಇರ್ತಾರೆ. ಹೀಗಿರುವಾಗ ಒಂದು ದಿನ ತಾವಿದ್ದ ಬೆಟ್ಟದಿಂದಾಚೆ ಇರುವ ಕನ್ನಿಕೆ ನದಿಯಲ್ಲಿ ಸ್ನಾನ ಮಾಡಲು ಹೋಗ್ತಾರೆ. ನಿದ್ದೆಯಲ್ಲಿರುವ ಕಾವೇರಿಯನ್ನ ಎಬ್ಬಿಸುವುದು ಬೇಡವೆಂದು ಹೋಗ್ತಾರೆ. ಸ್ವಲ್ಪ ಹೊತ್ತಿನ ಬಳಿಕ ಕಾವೇರಿಗೆ ಎಚ್ಚರವಾಗುತ್ತೆ. ಪತಿ ಕೊಟ್ಟ ಮಾತನ್ನು ತಪ್ಪಿದನೆಂದು ನದಿಯಾಗಿ ಲೋಕಕಲ್ಯಾಣಕ್ಕೆ ಹೊರಡುತ್ತಾಳೆ. ಪತಿಗೆ ತಿಳಿಯದಂತೆ ಗುಪ್ತಗಾಮಿನಿಯಾಗಿ ಹರಿದು ಭಾಗಮಂಡಲ ಸೇರುತ್ತಾಳೆ. ಅಲ್ಲಿಂದ ಕನ್ನಿಕೆ, ಸಜ್ಯೋತಿ ನದಿಗಳ ಜೊತೆ ಸಂಗಮವಾಗ್ತಾಳೆ. ಹೀಗೆ ಹೊರಟ ಕಾವೇರಿ ಪ್ರತಿವರ್ಷ ತುಲಾ ಸಂಕ್ರಮಣದಂದು ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ತೀರ್ಥಸ್ವರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡ್ತಾಳೆ.
802 ಕಿಲೋ ಮೀಟರ್ ಹರಿಯುವ ಕಾವೇರಿ
ಮಡಿಕೇರಿಯಿಂದ 42 ಕಿಲೋ ಮೀಟರ್ ದೂರದಲ್ಲಿರುವ ಬ್ರಹ್ಮಗಿರಿ ಬೆಟ್ಟದ ಶ್ರೇಣಿಯ ತಲಕಾವೇರಿಯಲ್ಲಿ ಜನಿಸಿ, ಭಾಗಮಂಡಲ, ಬಲಮುರಿ, ಗುಹ್ಯ ಕಣಿವೆ ಮೂಲಕ ಹರಿದು ಕರುನಾಡಿನಲ್ಲಿ 381 ಕಿಲೋ ಮೀಟರ್ ಸಂಚರಿಸ್ತಾಳೆ. ನಂತರ ತಮಿಳುನಾಡು, ಪಾಂಡಿಚೇರಿ ಮೂಲಕ 802 ಕಿಲೋ ಮೀಟರ್ ಹರಿದು ಕಾವೇರಿ ಪಟ್ಟಣಂನಲ್ಲಿ ಬಂಗಾಳಕೊಲ್ಲಿ ಸೇರುತ್ತಾಳೆ. ಹೀಗೆ ಹರಿದ ಕಾವೇರಿ ದಾರಿಯುದ್ದಕ್ಕೂ ಪವಿತ್ರ ಕ್ಷೇತ್ರಗಳನ್ನ ಸ್ಥಾಪಿಸಿ ಲಕ್ಷಾಂತರ ಭಕ್ತರಿಂದ ಪೂಜಿಸಲ್ಪಡ್ತಾಳೆ.