ಪ್ರಜಾಸ್ತ್ರ ಸುದ್ದಿ
ಧಾರವಾಡ: ಹೊಸ ಮಾರುಕಟ್ಟೆಯ ತಂತ್ರಗಳ ಜೊತೆಗೆ ಕೌಶಲ್ಯವನ್ನು ವಿದ್ಯಾರ್ಥಿ ದೆಸೆಯಿಂದಲೇ ಮೈಗೂಡಿಸಿಕೊಳ್ಳಬೇಕು ಎಂದು ಕರ್ನಾಟಕ ಕಲಾ ಕಾಲೇಜಿನ ಬಿಬಿಎ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ಬಿ.ಬಿ.ಬಿರಾದಾರ ಹೇಳಿದರು. ಕರ್ನಾಟಕ ಕಲಾ ಕಾಲೇಜಿನ ಬಿಬಿಎ ಅಧ್ಯಯನ ವಿಭಾಗದ ವತಿಯಿಂದ ಆಯೋಜಿಸಿದ್ದ ಆಹಾರ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಠ್ಯಕ್ರಮದ ಅನುಗುಣವಾಗಿ ವಿದ್ಯಾರ್ಥಿಗಳೇ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವ ತಂತ್ರವನ್ನು ಕಲಿಯುವುದು ಆಹಾರ ಮೇಳದ ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ವ್ಯವಹಾರ ಅಧ್ಯಯನ ವಿಭಾಗದ ಎಲ್ಲಾ ಸೆಮಿಸ್ಟರ್ ವಿದ್ಯಾರ್ಥಿಗಳು ಕಡ್ಡಾಯವಾಗಿ ಇಂತಹ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು.
ಮೇಳದಲ್ಲಿ 11 ವಿವಿಧ ಸ್ಟಾಲ್ ಗಳಲ್ಲಿ ಸ್ಯಾಂಡ್ ವಿಚ್, ಚಾಟ್ಸ್, ವೆಜ್ ರೋಲ್ಸ್, ಕೇಕ್, ವಿವಿಧ ರೀತಿಯ ಪ್ರೋಟೀನ್ ಪಾನೀಯಗಳು ವಿದ್ಯಾರ್ಥಿಗಳೆ ತಯಾರಿಸಿ ಕಾಲೇಜಿನ ಬೇರೆಬೇರೆ ವಿಭಾಗದ ವಿದ್ಯಾರ್ಥಿಗಳಿಗೆ ಮಾರಾಟ ಮಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಸುಬ್ರಹ್ಮಣ್ಯ ಭಟ್, ಡಾ.ಶ್ರೀಶೈಲ ಗಣಿ, ಡಾ.ಬಿ.ಎಸ್.ಭಜಂತ್ರಿ, ಡಾ.ಸ್ಪೂರ್ತಿ ಶಿಂಧೆ, ಡಾ.ವಿಜಯಕುಮಾರ್ ಬಿರಾದರ, ಡಾ.ಹರ್ಷ ಘೊಡ್ಸೆ, ವಿದ್ಯಾರ್ಥಿಗಳಾದ ದೀಪಕ ಕಟಗಿ, ಮನಿಷ್, ಅರುಣಿಮಾ, ಪೂರ್ಣಿಮಾ ಹಾಜರಿದ್ದರು.