ಪ್ರಜಾಸ್ತ್ರ ಸುದ್ದಿ
ಕೋಲಾರ: ಜಿಲ್ಲಾಡಳಿತದ ನಿಷೇಧದ ನಡುವೆಯೂ ಕೋಲಾರ ಪ್ರವೇಶ ಮಾಡಿದ ಶ್ರೀರಾಮ್ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಿಲ್ಲೆಯ ಗಡಿ ರಾಮಸಂದ್ರದಲ್ಲಿ ಪೊಲೀಸರು ಮುತಾಲಿಕ್ ಹಾಗೂ ಶ್ರೀರಾಮ್ ಸೇನೆ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.
ದತ್ತಮಾಲಾಧಾರಿಗಳಿದ್ದ ಬಸ್ ಮೇಲೆ ಅನ್ಯಕೋಮಿನವರು ಕಲ್ಲು ತೂರಾಟ ನಡೆಸಿರುವ ಘಟನೆ ಸಂಬಂಧ ಹಿಂದುಪರ ಸಂಘಟನೆಗಳಿಂದ ಇಂದು ಕೋಲಾರ ಬಂದ್ ಗೆ ಕರೆ ನೀಡಲಾಗಿದೆ. ಹೀಗಾಗಿ ಕೋಮುಸೌಹಾರ್ದತೆಗೆ ದಕ್ಕೆ ತರುವ ರೀತಿಯಲ್ಲಿ ಈ ಹಿಂದೆ ಭಾಷಣ ಮಾಡಿರುವ ಕಾರಣಕ್ಕೆ ಮುತಾಲಿಕರನ್ನು ಜಿಲ್ಲೆಯ ಪ್ರವೇಶಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಲಾಗಿತ್ತು. ಹೀಗಿದ್ದರೂ ಪ್ರವೇಶಕ್ಕೆ ಯತ್ನಿಸಿದಾಗ ಪೊಲೀಸ್ ವಶಕ್ಕೆ ಪಡೆಯಲಾಗಿದೆ.
ಈ ವೇಳೆ ಮಾತನಾಡಿದ ಅವರು, ನವೆಂಬರ್ 13ರಂದು ನಡೆದ ಘಟನೆಯನ್ನು ಖಂಡಿಸುತ್ತೇನೆ. ಇದನ್ನು ಖಂಡಿಸಿ ಪ್ರತಿಭಟನೆಗೆ ಅವಕಾಶ ಕೊಡದ ಬಿಜೆಪಿ ಸರ್ಕಾರದ ಕ್ರಮ ಸರಿಯಲ್ಲ. ಸರ್ಕಾರದ ನಡೆಯ ಬಗ್ಗೆ ಸಿಟ್ಟು ಬರುತ್ತಿದೆ ಅಂತಾ ಮುತಾಲಿಕ್ ಹೇಳಿದರು.