ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮಾಜಿ ಸಚಿವ ರಮೇಶ ಜಾರಕಿಹೊಳಿ ಪ್ರಕರಣದಲ್ಲಿ ಎಂಟ್ರಿಯಾಗಿದ್ದ ವಕೀಲ ಜಗದೀಶ್ ಸಾಮಾಜಿಕ ಜಾಲತಾಣಗಳ ಮೂಲಕ ವೈರಲ್ ಆದವರು. ಇದೀಗ ಸೋಷಿಯಲ್ ಮೀಡಿಯಾ ಓಪನ್ ಮಾಡಿದರೆ ಸಾಕು ವಕೀಲ ಜಗದೀಶ್ ಅವರ ವಿಡಿಯೋಗಳು ಹರಿದಾಡುತ್ತಿವೆ. ಪದೆಪದೆ ಫೇಸ್ ಬುಕ್ ಲೈವ್ ಬಂದು, ಐಪಿಎಸ್ ಅಧಿಕಾರಿ ವಿರುದ್ಧ ಕೇಳಿ ಬಂದ ಭ್ರಷ್ಟಾಚಾರ ಆರೋಪ ಹಾಗೂ ನೆಲಮಂಗಲ, ದಾಬಸಪೇಟೆ ವಿಚಾರವಾಗಿಯೂ ಮಾತನಾಡುತ್ತಿದ್ದಾರೆ.
ವಕೀಲ ಜಗದೀಶ್ ಸೋಷಿಯಲ್ ಮೀಡಿಯಾದಲ್ಲಿ ಬಂದು ಗಂಟಲು ಹರಿದುಕೊಂಡು ಹೋಗುವಷ್ಟು ಮಾತನಾಡುತ್ತಿದ್ದಾರೆ. ಅನ್ಯಾದ ವಿರುದ್ಧ ಧ್ವನಿ ಎತ್ತಿದ್ದೇನೆ. ಭ್ರಷ್ಟರ ವಿರುದ್ಧ ಹೋರಾಡುತ್ತೇನೆ ಎನ್ನುತ್ತಿರುವ ಅವರು, ಸಿಎಂ ಬೊಮ್ಮಾಯಿ, ಸಚಿವರಾದ ಅರಗ ಜ್ಞಾನೇಂದ್ರ, ಅಶ್ವಥನಾರಾಯಣ್ ಸೇರಿದಂತೆ ಪೊಲೀಸ್ ಇಲಾಖೆಯ ಡಿಜಿ ಐಜಿಪಿ ಅವರಿಂದ ಹಿಡಿದು ಎಲ್ಲರನ್ನೂ ಬಾಯಿಗೆ ಬಂದಂತೆ ಬೈಯುತ್ತಿದ್ದಾರೆ ಮತ್ತು ಸವಾಲ್ ಹಾಕುತ್ತಿದ್ದಾರೆ.
ಐಪಿಎಸ್ ಅಧಿಕಾರಿ ಹಾಗೂ ರೌಡಿ ಶೀಟರ್ ಎಂದು ಹೇಳಲಾಗುತ್ತಿರುವ ವ್ಯಕ್ತಿಗಳ ಮೇಲೆ ಕೇಳಿ ಬಂದಿರುವ ಆರೋಪದ ಬಗ್ಗೆ ವಕೀಲ ಜಗದೀಶ್ ಹಾಗೂ ಅವರ ತಂಡ ವಾಗ್ದಾಳಿ ನಡೆಸುತ್ತಿದ್ದರೂ, ಸರ್ಕಾರ ಯಾಕೆ ಮೌನವಾಗಿದೆ ಅನ್ನೋದು ಗೊತ್ತಾಗುತ್ತಿಲ್ಲ. ಇಡೀ ಪ್ರಕರಣ ಹಲವು ದಿಕ್ಕುಗಳಲ್ಲಿ ಸುತ್ತಿಕೊಂಡು ಬರುತ್ತಿದೆ. ಹಲವು ಪ್ರಭಾವಿ ರಾಜಕಾರಣಿಗಳ ಜೊತೆಗೆ ತಳಕು ಹಾಕಿಕೊಳ್ಳುತ್ತಿದೆ. ಹೀಗಿದ್ದರೂ ಸರ್ಕಾರ ಸ್ಪಷ್ಟೀಕರಣ ಕೊಡದೆ ಸುಮ್ಮನೆ ಇರುವುದು ಯಾಕೆ ಅನ್ನೋ ಪ್ರಶ್ನೆ ಜನರಲ್ಲಿ ಮೂಡಿದೆ.