ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸೊರಬ ಪಟ್ಟಣದ ಹಾಸ್ಟೆಲ್ ವೊಂದರಲ್ಲಿ ಕಾರ್ಯನಿರ್ವಹಿಸ್ತಿದ್ದ ಯುವತಿಯ ಕೊಲೆ ರಹಸ್ಯ ಬಯಲಾಗಿದೆ. ಈ ಪ್ರಕರಣ ಸಂಬಂಧ ಯುವತಿಯ ಪ್ರಿಯಕರ ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿಯ 26 ವರ್ಷದ ರಮೇಶ ಎಂಬಾತನನ್ನು ಬಂಧಿಸಲಾಗಿದೆ.
ಜುಲೈ 15ರಂದು 22 ವರ್ಷದ ಯುವತಿಯನ್ನ ಕೊಲೆ ಮಾಡಿ ಪರಾರಿಯಾಗಿದ್ದ. ಯುವತಿ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿರುವುದನ್ನ ತಿಳಿದ ಪೊಲೀಸ್ರು ತನಿಖೆ ಕೈಗೊಂಡ್ರು. ಆಗ ಆಕೆಯ ಪ್ರಿಯಕರ ರಮೇಶ ವಿಚಾರ ಬೆಳಕಿಗೆ ಬಂದಿದೆ. ಆತನನ್ನ ಬಂಧಿಸಿ ಪೊಲೀಸ್ ಸ್ಟೈಲ್ ನಲ್ಲಿ ವಿಚಾರಣೆ ನಡೆಸಿದಾಗ ರಹಸ್ಯ ಬಾಯಿಬಿಟ್ಟಿದ್ದಾನೆ.
6 ವರ್ಷದ ಪ್ರೀತಿ ಕೊಲೆಯಲ್ಲಿ ಅಂತ್ಯ!
26 ವರ್ಷದ ರಮೇಶ ಹಾಗೂ ಸರ್ಕಾರಿ ಹಾಸ್ಟೆಲ್ ನಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ನಿರ್ವಹಿಸ್ತಿದ್ದ 22 ವರ್ಷದ ಯುವತಿ ಕಳೆದ 6 ವರ್ಷಗಳಿಂದ ಪ್ರೀತಿ ಮಾಡ್ತಿದ್ದರಂತೆ. ಯುವತಿಗೆ ಸರ್ಕಾರಿ ನೌಕರಿ ಸಿಕ್ಕ ಮೇಲೆ ರಮೇಶನನ್ನ ತಿರಸ್ಕಾರ ಮಾಡಿದ್ದಾಳಂತೆ. ಹೀಗಿದ್ರೂ ರಮೇಶ ಯುವತಿಯ ಮನೆಗೆ ಆಗಾಗ ಬಂದು ಹೋಗ್ತಿದ್ದನಂತೆ. ಅದೇ ರೀತಿ ಜುಲೈ 14ರಂದು ರಮೇಶ ಯುವತಿಯ ಮನೆಗೆ ಬಂದಿದ್ದಾನೆ. ಆ ದಿನ ಅಲ್ಲಿಯೇ ಉಳಿದುಕೊಂಡಿದ್ದಾನೆ.
ಈ ವೇಳೆ ಇವರಿಬ್ಬರ ನಡುವೆ ಮಾತುಕತೆ ನಡೆದಿದೆ. ನಾನು ಬೇರೆ ಹುಡ್ಗನನ್ನ ಪ್ರೀತಿ ಮಾಡ್ತಿದೀನಿ. ಇದೇ ಲಾಸ್ಟ್, ಮತ್ತೆ ಬರಬೇಡವೆಂದು ಹೇಳಿದ್ದಾಳೆ. ಇದ್ರಿಂದ ಕೋಪಗೊಂಡ ರಮೇಶ ವೇಲ್ ತೆಗೆದುಕೊಂಡು ಆಕೆಯ ಕುತ್ತಿಗೆ ಬಿಗಿದು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಕೊಲೆ ಮಾಡಿದ ಬಳಿಕ ಯುವತಿಯ ಮೊಬೈಲ್ ಸಮೇತ ಎಸ್ಕೇಪ್ ಆಗಿದ್ದ ರಮೇಶನನ್ನ ಮೊಬೈಲ್ ಲೊಕೇಷನ್ ಆಧಾರದ ಮೇಲೆ ಪೊಲೀಸ್ರು ಬಂಧಿಸಿದ್ದಾರೆ.