ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮಂಡ್ಯ ಜಿಲ್ಲೆಯ ಪ್ರಸಿದ್ಧ ಅರಕೇಶ್ವರ ದೇವಾಲಯದ ಮೂವರು ಅರ್ಚಕರನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹುಂಡಿಯಲ್ಲಿನ ಹಣ ಕದಿಯಲು ಬಂದ ಖದೀಮರು ಗುರುವಾರ ತಡರಾತ್ರಿ ಈ ಕೃತ್ಯವೆಸಗಿ ಹೋಗಿದ್ದಾರೆ.
35 ವರ್ಷದ ಗಣೇಶ, 33 ವರ್ಷದ ಆನಂದ ಹಾಗೂ 36 ವರ್ಷದ ಪ್ರಕಾಶ ಎಂಬುವರನ್ನ ಹತ್ಯೆ ಮಾಡಲಾಗಿದೆ. ಇದೀಗ ಸಿಎಂ ಬಿ.ಎಸ್ ಯಡಿಯೂರಪ್ಪ, ಹತ್ಯೆಯಾದ ಮೂವರು ಅರ್ಚಕರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮೂಲಕ ತಿಳಿಸಿದ್ದು, ತಪ್ಪಿತಸ್ಥರ ವಿರುದ್ಧ ಕೂಡಲೇ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ಆದ್ರೆ, ಕಳೆದ ಆಗಸ್ಟ್ 25ರಂದು ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದಲ್ಲಿನ ಐಸಿಐಸಿಐ ಸೆಕ್ಯೂರಿಟಿ ಗಾರ್ಡ್ ರಾಹುಲ ಖೀರು ರಾಠೋಡ ಎಂಬಾತನನ್ನ ಹತ್ಯೆ ಮಾಡಲಾಗಿದೆ. ಬ್ಯಾಂಕ್ ಕಳ್ಳತನಕ್ಕೆ ಬಂದ ಖದೀಮರು ಈ ಕೃತ್ಯವೆಸಗಿ ಹೋಗಿದ್ದಾರೆ. ಈ ಘಟನೆ ನಡೆದು 15 ದಿನಗಳಾಗುತ್ತಾ ಬಂದಿದೆ. ಇದುವರೆಗೂ ಆ ಕುಟುಂಬಕ್ಕೂ ನಯಾಪೈಸಾ ಪರಿಹಾರ ಸಿಕ್ಕಿಲ್ಲ.
ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಗಳಲ್ಲಿ ಮೂವರು ಇರೋದು ಕಂಡು ಬಂದಿದೆ. ಮುಖಕ್ಕೆ ಖರ್ಚೀಫ್ ಕಟ್ಟಿಕೊಂಡಿದ್ದ ಕಳ್ಳರು, ಸೆಕ್ಯೂರಿಟಿ ಗಾರ್ಡ್ ಹತ್ಯೆ ಮಾಡಿ ಹೋಗಿದ್ದಾರೆ. ದುಡಿಯಲು ಊರು ಬಿಟ್ಟು ಊರಿಗೆ ಬಂದು ಹೆಣವಾಗಿ ಹೋದವನ ಕುಟುಂಬಕ್ಕೆ ಯಾರೊಬ್ಬರು ಬೆಂಬಲ ನೀಡಲಿಲ್ಲ. ಪರಿಹಾರ ಕೊಡಿಸುವ ಪ್ರಯತ್ನ ಮಾಡಲಿಲ್ಲ ಅನ್ನೋದು ವಿಪರ್ಯಾಸ.