ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿ ಊಟದ ಸಂದರ್ಭದಲ್ಲಿ ಪೌಷ್ಟಿಕಾಂಶ ಹೆಚ್ಚಳಕ್ಕೆ ಸಂಬಂಧಿಸಿದಂತೆ ಮೊಟ್ಟೆ ಹಾಗೂ ಬಾಳೆಹಣ್ಣು ನೀಡಲಾಗುತ್ತಿದೆ. ಆದರೆ, ಕೆಲ ದಿನಗಳಿಂದ ಮೊಟ್ಟೆ ಕೊಡುವುದನ್ನು ಬೇಡ ಎಂದು ಕೆಲ ಸ್ವಾಮೀಜಿಗಳ ತಂಡ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದೆ. ಪ್ರತಿಭಟನೆ ಸಹ ಮಾಡಿದೆ.
ಶಾಲೆಗಳಲ್ಲಿ ಮೊಟ್ಟೆಗಳನ್ನು ಕೊಡುವುದು ಬೇಡ ಎಂದ ಸ್ವಾಮೀಜಿಗಳ ತಂಡದ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ. ಪ್ರತಿಭಟನೆಗಳು ನಡೆದಿವೆ. ಈ ಬಗ್ಗೆ ಮಾತನಾಡಿರುವ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಪೌಷ್ಟಿಕಾಂಶ ವಿಚಾರದಲ್ಲಿ ಮೊಟ್ಟೆಗೆ ಬಾಳೆಹಣ್ಣು ಸಮನಾಗಿಲ್ಲ. ಹೀಗಾಗಿ ಶೇಂಗಾ ಚಿಕ್ಕಿ(ಮಿಠಾಯಿ) ಹಾಗೂ ಬಾಳೆಹಣ್ಣು ನೀಡಲಾಗುತ್ತೆ. ಯಾವುದಾದರು ಆಯ್ಕೆ ಮಾಡಿಕೊಳ್ಳಬಹುದು ಎಂದಿದ್ದಾರೆ. ಮೊಟ್ಟೆ ನೀಡುವ ನೀಡದೆ ಇರುವ ಕುರಿತು ಸ್ಪಷ್ಟವಾಗಿ ಹೇಳಿಲ್ಲ. ಶೇಂಗಾ ಚಿಕ್ಕಿ ಪ್ರಸ್ತಾಪ ಮಾಡಿರುವುದರಿಂದ ಮೊಟ್ಟೆ ಇರುವುದಿಲ್ಲವೆಂದು ಹೇಳಲಾಗುತ್ತಿದೆ.
ಈ ಸಂಬಂಧ ವಿವಿಧ ಪರೀಕ್ಷೆಗೆ ಒಳಪಡಿಸಿ, ಶೇಂಗಾ ಚಿಕ್ಕಿ ವಿತರಿಸುವ ಕುರಿತು ಹಾಲು ಒಕ್ಕೂಟದ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳು ಬಡ ಹಾಗೂ ಮಧ್ಯಮ ವರ್ಗದವರು. ಅವರಿಗೆ ಪೌಷ್ಟಿಕಾಂಶದ ಅವಶ್ಯಕತೆ ತುಂಬಾ ಇದೆ ಅನ್ನೋದು ಸಾಕಷ್ಟು ವರದಿಗಳಿಂದ ತಿಳಿದು ಬಂದಿದೆ. ಆದರೆ, ಸರ್ಕಾರ ಇಂತವರ ಪರ ನಿಲ್ಲದೆ ಸ್ವಾಮೀಜಿಗಳು ಹೇಳಿದರು ಅನ್ನೋ ಕಾರಣಕ್ಕೆ ಮೊಟ್ಟೆ ಕೊಡುವುದನ್ನು ಕೈ ಬಿಟ್ಟು ಶೇಂಗಾ ಚಿಕ್ಕಿ ಹಾಗೂ ಬಾಳೆಹಣ್ಣು ಕೊಡ್ತೀವಿ. ಯಾವುದಾದರು ಆಯ್ಕೆ ಮಾಡಿಕೊಳ್ಳಿ ಅನ್ನೋದು ಎಷ್ಟೊಂದು ಸರಿ ಅನ್ನೋ ಪ್ರಶ್ನೆ ಎದುರಾಗಿದೆ. ಇದು ಹೀಗೆ ಮುಂದುವರೆದರೆ ಜಾತಿ, ಧರ್ಮದ ಆಧಾರದ ಮೇಲೆ ಮತ್ತೆ ತಳಸಮುದಾಯಗಳನ್ನು ತುಳಿಯುವ ಕೆಲಸವಾಗುತ್ತೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.