ಪ್ರಜಾಸ್ತ್ರ ಸುದ್ದಿ
ಧಾರವಾಡ: ಶಾಸಕ ಅರವಿಂದ ಬೆಲ್ಲದ ಅವರಿಗೆ ಶಕ್ತಿ ಇದ್ದರೆ ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಬಹಿರಂಗವಾಗಿ ಹೇಳಲಿ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಗುರುರಾಜ ಹುಣಸೀಮರದ ಸವಾಲು ಹಾಕಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತ್ನಾಡಿದ ಅವರು, ಜನರು ಕರೋನಾದಿಂದ ಸಂಕಷ್ಟ ಎದುರಿಸ್ತಿದ್ದಾರೆ. ಇವರು ದೆಹಲಿ ಸುತ್ತಾಟ ನಡೆಸ್ತಿದ್ದಾರೆ ಎಂದು ಕಿಡಿ ಕಾರಿದ್ರು.
ಸುಮಾರು 4 ತಿಂಗಳಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಮಳೆಗಾಲ ಶುರುವಾಗಿದೆ. ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರಗಳ ಕೊರತೆ ಹಾಗೂ ಕೆಲವಡೆ ಕೋವಿಡ್ ಲಸಿಕೆಯ ಕೊರತೆ ಇದೆ. ಈ ಬಗ್ಗೆ ತಲೆ ಕೆಡಿಸಿಕೊಳ್ಳದ ಶಾಸಕ ಅರವಿಂದ ಬೆಲ್ಲದ, ದೆಹಲಿ-ಬೆಂಗಳೂರು ಸುತ್ತಾಡುವುದನ್ನು ಬಿಟ್ಟು ಕ್ಷೇತ್ರದ ಜನರ ಹಿತ ಕಾಪಾಡಬೇಕು ಎಂದು ಹೇಳಿದ್ರು.
ಅರವಿಂದ ಬೆಲ್ಲದಗೆ ಶಕ್ತಿ ಇದ್ದರೆ ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಬಹಿರಂಗವಾಗಿ ಹೇಳಲಿ. ದೆಹಲಿಗೆ ಹೋಗಿದ್ದರೂ ನಾನು ಹೋಗಿಲ್ಲ ಎಂದು ಹೇಳುತ್ತ ಜನರ ಹಾದಿ ತಪ್ಪಿಸ್ತಿದ್ದಾರೆ. ಶಾಸಕ ಬೆಲ್ಲದ ಯಾವುದೇ ಪಕ್ಷ ಕಟ್ಟದೆ ಕಾರ್ಯಕರ್ತರನ್ನ ತುಳಿದು ಶಾಸಕರಾಗಿದ್ದಾರೆ. ಈಗ ಮುಖ್ಯಮಂತ್ರಿಯಾಗಲು ಹೊರಟಿರುವ ಅವರಿಗೆ ಪಾಲಿಕೆ ಆಯುಕ್ತರಿಂದ ಒಂದು ಕೆಲಸ ಮಾಡಿಸಿಕೊಳ್ಳಲು ಸಾಧ್ಯವಿಲ್ಲವೆಂದು ಕಾಲೆಳೆದರು.
ಈ ವೇಳೆ ಜೆಡಿಎಸ್ ಮುಖಂಡರಾದ ಶಾಂತವೀರ ಬೆಟಗೇರಿ, ರಾಜು ಅಂಬೋರೆ, ರಮಾನಾಥ ಶೆಣೈ ಈರಣ್ಣ ಬಾರಕೇರ ಉಪಸ್ಥಿತರಿದ್ದರು.