ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಖಾಸಗಿ ವಾಹಿನಿಯ ರಿಯಾಲಿಟಿ ಶೋಗೆ ಹೋಗಿರುವ ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗುತ್ತಿದೆ. ಓರ್ವ ಜನಪ್ರತಿನಿಧಿಯಾಗಿ, ಮನರಂಜನೆಯ ಶೋಗೆ ಹೋದರೆ ಕ್ಷೇತ್ರದ ಜನರ ಕೆಲಸ ಮಾಡೋದ್ಯಾರು ಎನ್ನುತ್ತಿದ್ದಾರೆ.
ಶಾಸಕರಾಗಿದ್ದುಕೊಂಡು ಹೀಗೆ ರಿಯಾಲಿಟಿ ಶೋಗಳಿಗೆ ಹೋಗಬಹುದೇ ಅನ್ನೋ ಪ್ರಶ್ನೆ ಎದ್ದಿದ್ದು, ಕೆಲವರು ಇವರ ವಿರುದ್ಧ ಸಭಾಪತಿಗೆ ದೂರು ಸಲ್ಲಿಸಲು ಮುಂದಾಗಿದ್ದಾರೆ. ಕ್ಷೇತ್ರದ ಜನರ ಸಮಸ್ಯೆಗೆ ಸ್ಪಂದಿಸುತ್ತಾರೆ ಎಂದು ಮತ ಹಾಕಿ ಗೆಲ್ಲಿಸಿದರೆ ಇವರು ರಿಯಾಲಿಟಿ ಶೋನಲ್ಲಿ ಹೋಗಿ ಆಟವಾಡಿಕೊಂಡು ಕುಳಿತರೆ ಹೇಗೆ ಎನ್ನುತ್ತಿದ್ದಾರೆ. ಈ ಕುರಿತು ಜನಪ್ರತಿನಿಧಿ ಕಾಯ್ದೆ ಏನು ಹೇಳುತ್ತೆ? ಜವಾಬ್ದಾರಿಯುತ ಸ್ಥಾನದಲ್ಲಿರುವವರು ನಡೆದುಕೊಳ್ಳುವ ರೀತಿನಾ ಇದು ಅಂತಾ ವಾಗ್ದಾಳಿ ನಡೆಸಲಾಗುತ್ತಿದೆ.
ಸಾರ್ವಜನಿಕರು ಸರ್ಕಾರವನ್ನು ಸಹ ಪ್ರಶ್ನಿಸುತ್ತಿದ್ದಾರೆ. ತಮ್ಮ ಪಕ್ಷದ ಶಾಸಕರೊಬ್ಬರು ಹೀಗೆ ರಿಯಾಲಿಟಿ ಶೋಗೆ ಹೋಗುವುದನ್ನು ನೋಡಿಕೊಂಡು ಸುಮ್ಮನೆ ಕುಳಿತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಏನು ಹೇಳುತ್ತಾರೆ ಖಾರವಾಗಿ ಪ್ರಶ್ನಿಸುತ್ತಿದ್ದು, ಈ ಪ್ರಕರಣ ಏನಾಗುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ತಿಳಿಯಲಿದೆ.