ಪ್ರಜಾಸ್ತ್ರ ಸುದ್ದಿ
ಕಲಬುರಗಿ: ಮಹಿಳೆಯೊಬ್ಬರು ನೀಡಿದ ದೂರನ್ನ ಸ್ವೀಕರಿಸದೆ ಕರ್ತವ್ಯಲೋಪವೆಸಗಿರುವ ಕಲಬುರಗಿಯ ಸ್ಟೇಷನ್ ಬಜಾರ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಗೆ ಒಂದು ವಾರಗಳ ಕಾಲ ಕಸ ಗುಡಿಸುವ ಶಿಕ್ಷೆ ನೀಡಲಾಗಿದೆ. ಸ್ಟೇಷನ್ ಮುಂದಿನ ಕಸ ಗುಡಿಸುವಂತೆ ಹೈಕೋರ್ಟ್ ಆದೇಶಿಸಿದೆ.
ಮಿಣಜಗಿ ತಾಂಡದ ನಿವಾಸಿ ತಾರಾಬಾಯಿ ತನ್ನ ಮಗ ಅಕ್ಟೋಬರ್ 20ರಂದು ನಾಪತ್ತೆಯಾಗಿದ್ದಾನೆ. ಆತನನ್ನ ಹುಡುಕಿಕೊಡಿ ಎಂದು ದೂರು ನೀಡಲು ಠಾಣೆಗೆ ಬಂದಿದ್ದಾರೆ. ಆದ್ರೆ, ದೂರು ಪಡೆದುಕೊಂಡಿಲ್ಲ. ಅವರ ಮಗನನ್ನ ಹುಡುಕಿಯೂ ಕೊಟ್ಟಿಲ್ಲ. ಹೀಗಾಗಿ ಅವರು ಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ರು.
ಮಹಿಳೆ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಸುನೀಲ ದತ್ ಹಾಗೂ ನ್ಯಾಯಮೂರ್ತಿ ಪಿ.ಕೃಷ್ಣ ಭಟ್ ಅವರಿದ್ದ ವಿಭಾಗೀಯ ಪೀಠ, ನಾಪತ್ತೆಯಾಗಿರುವ ಮಗನನ್ನ ಹುಡುಕಿಕೊಡಬೇಕು ಎಂದು ಆದೇಶಿಸಿದೆ. ಇದರ ಜೊತೆಗೆ ಕರ್ತವ್ಯಲೋಪದಡಿಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಗೆ ಒಂದು ವಾರಗಳ ಕಾಲ ಸ್ಟೇಷನ್ ಮುಂದಿನ ಕಸ ಗುಡಿಸುವ ಶಿಕ್ಷೆ ವಿಧಿಸಿದೆ.