ಪ್ರಜಾಸ್ತ್ರ ಡೆಸ್ಕ್
ಬೆಂಗಳೂರು: ಸಮಾಜದಲ್ಲಿ ಕೋಮು ಸಾಮರಸ್ಯ ಕದಡುವ ಯಾರೇ ಆಗಿರಲಿ ಅವರಿಗೆ ಕಾನೂನು ಅಡಿಯಲ್ಲಿ ಶಿಕ್ಷೆ ಕೊಡಬೇಕು ಎಂದು ಹೇಳಲಾಗುತ್ತೆ. ಅದಕ್ಕೆಯಾದ ಒಂದಿಷ್ಟು ಕಾನೂನುಗಳು ಸಹ ಇವೆ. ಈ ಕಾನೂನಿನ ಅಸ್ತ್ರ ಬರೀ ಜನಸಾಮಾನ್ಯರು, ಸಾಮಾಜಿಕ ಹೋರಾಟಗಾರರ ಮೇಲೆ ಮಾತ್ರ ಪ್ರಯೋಗವಾ ಅನ್ನೋ ಪ್ರಶ್ನೆ ಕಾಡುತ್ತಿದೆ.
ರಾಜ್ಯದಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ ಕರ್ನಾಟಕ ಎಷ್ಟೊಂದು ಕಲುಷಿತಗೊಳ್ಳುತ್ತಿದೆ ಅನ್ನೋ ಭಯ ಮೂಡುತ್ತಿದೆ. ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ರಾಜಕಾರಣಿಗಳ ಮಾತುಗಳು ಇರುತ್ತವೆ. ಇವರ ಇಂತಹ ಮಾತುಗಳಿಗೆ ಕಡಿವಾಣ ಇಲ್ಲವಾ? ರಾಜಕಾರಣಿಗಳು ಬಾಯಿಗೆ ಬಂದಂತೆ ಮಾತನಾಡುತ್ತಿದ್ದರೂ ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಇಲಾಖೆ ಯಾಕೆ ಕೈ ಕಟ್ಟಿಕೊಂಡು ಇರುತ್ತೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವಿಷ ಬೀಜ ಬಿತ್ತುವರ ಮೇಲೆ ಸೂಕ್ರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳುವ ಹಿರಿಯ ಪೊಲೀಸ್ ಅಧಿಕಾರಿಗಳು, ಅದಕ್ಕೆ ಪ್ರಚೋದನೆ ನೀಡುತ್ತಿರುವ, ಧರ್ಮ ಧರ್ಮಗಳ ನಡುವೆ ಮತ್ತಷ್ಟು ಗಲಭೆ ಸೃಷ್ಟಿಸುವಂತಹ ಹೇಳಿಕೆ ನೀಡುವ ರಾಜಕಾರಣಿಗಳ ವಿರುದ್ಧ ಮೊದಲು ಕ್ರಮ ತೆಗೆದುಕೊಳ್ಳಬೇಕಿದೆ. ಯಾರ ಮುಲಾಜಿಗೂ ಕಾಯದೆ ಇಂಥಹ ಕೋಮು ರಾಜಕಾರಣಿಗಳ ವಿರುದ್ಧ ಕಾನೂನು ಅಸ್ತ್ರ ಪ್ರಯೋಗಿಸಬೇಕಿದೆ. ಇಲ್ಲದೆ ಹೋದರೆ ಕರ್ನಾಟಕ ಉತ್ತರ ಪ್ರದೇಶ, ಬಿಹಾರನಂತೆ ಕಳಂಕ ಹೊತ್ತುಕೊಳ್ಳಬೇಕಾಗುತ್ತೆ.