ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕಾಂಗ್ರೆಸ್ ಸರ್ಕಾರ ರಚನೆ ಸಂದರ್ಭದಲ್ಲಿ ಮುಖ್ಯಮಂತ್ರಿ ಯಾರು ಅನ್ನೋ ಚರ್ಚೆ ಜೋರಾಗಿತ್ತು. ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ನಡುವೆ ತೀವ್ರ ಪೈಪೋಟಿ ನಡೆಯಿತು. ಕಾಂಗ್ರೆಸ್ ಹೈಕಮಾಂಡ್ ಮೂರ್ನಾಲ್ಕು ದಿನಗಳ ಕಾಲ ಸಭೆಯ ಮೇಲೆ ಸಭೆ ಮಾಡಿ ಕೊನೆಗೆ ಸಿದ್ದರಾಮಯ್ಯ ಸಿಎಂ ಎಂದು ಘೋಷಿಸಿತು.
ಇದಾದ ಬಳಿಕ ಡಿ.ಕೆ ಶಿವಕುಮಾರ್ ಬಣದಿಂದ ಅಸಮಾಧಾನ ಶುರುವಾಯಿತು. ಕಾಂಗ್ರೆಸ್ ಹೈಕಮಾಂಡ್ ಹೊಂದಾಣಿಕೆ ಮಾಡಿದೆ. ಎರಡೂವರೆ ವರ್ಷ ಸಿದ್ದರಾಮಯ್ಯ, ಎರಡೂವರೆ ಡಿಕೆಶಿ ಸಿಎಂ ಅನ್ನೋ ಸಂಧಾನ ಸೂತ್ರವಾಗಿದೆ ಅಂತಾ ಹೇಳಲಾಯಿತು. ಆದರೆ, ಈಗ ನೋಡಿದರೆ ಇಬ್ಬರು ಸಚಿವರು ಪೂರ್ತಿ ಐದು ವರ್ಷ ಸಿದ್ದರಾಮಯ್ಯ ಸಿಎಂ ಆಗಿರ್ತಾರೆ ಅಂತಾ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವ ಸಚಿವರಾದ ಕೆ.ಎನ್ ರಾಜಣ್ಣ ಹಾಗೂ ಸತೀಶ್ ಜಾರಕಿಹೊಳಿ ಈ ರೀತಿ ಹೇಳಿದ್ದಾರೆ. ಅಧಿಕಾರ ಹಂಚಿಕೆ ಬಗ್ಗೆ ಎಐಸಿಸಿ ನಾಯಕರು ಚರ್ಚೆ ಮಾಡುತ್ತಾರೆ. ರಾಜ್ಯದ ಜನರ ವಿಶ್ವಾಸ ಏನಿದೋ ಅದು ನನ್ನದು ಸಹ. ಮುಖ್ಯಮಂತ್ರಿಯಾಗಿ ಬಡವರ ಕಣ್ಣೀರು ಒರೆಸುವ ನಂಬಿಕೆ ಇಟ್ಟಿದ್ದಾರೆ. ಇಂತವರು ಸಿಎಂ ಆಗಿ ಹೆಚ್ಚು ಕಾಲ ಇರಬೇಕು ಅನ್ನೋದು ನನ್ನ ಆಸೆ ಅಂತಾ ಸಚಿವ ಕೆ.ಎನ್ ರಾಜಣ್ಣ ಹೇಳಿದ್ದಾರೆ.
ಇನ್ನು ಸಚಿವ ಸತೀಶ್ ಜಾರಕಿಹೊಳಿ, ತಲಾ ಎರಡೂವರೆ ವರ್ಷ ಅಂತಾ ಯಾರೂ ಹೇಳಿಲ್ಲ. ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಮುಂದುವರೆಯುತ್ತಾರೆ. ಅದು ಪಕ್ಷದ ನಿರ್ಧಾರಕ್ಕೆ ಬಿಟ್ಟಿದ್ದು ಅಂತಾ ಹೇಳಿದ್ದಾರೆ. ಈ ಇಬ್ಬರು ಸಚಿವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಮತ್ತೆ ಏನು ಸೃಷ್ಟಿಸಬಹುದು ಅನ್ನೋ ಕುತೂಹಲ ಜನರಲ್ಲಿ ಮೂಡಿದೆ.