ಪ್ರಜಾಸ್ತ್ರ ಸುದ್ದಿ
ಬೆಂಗಳೂರು: 2023ರ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಮೇಲಾಟಗಳು ಜೋರಾಗಿವೆ. ಎಲುಬಿಲ್ಲದ ನಾಲಿಗೆ ಬಾಯಿಗೆ ಬಂದಂತೆ ಮಾತನಾಡುತ್ತಿವೆ. ರಾಜಕೀಯ ಪಕ್ಷಗಳ ನಾಯಕರ ಮಾತುಗಳು ಜನರಿಗೆ ಅಸಹ್ಯ ಹುಟ್ಟಿಸುತ್ತಿದೆ. ಇದರ ನಡುವೆ ಬಿಜೆಪಿ ವಿಪಕ್ಷ ನಾಯಕ ಸಿದ್ದರಾಮಯ್ಯನವರನ್ನು ಕಟ್ಟಿ ಹಾಕಲು ‘ಸಿದ್ದು ನಿಜಕನಸುಗಳು’ ಅನ್ನೋ ಪುಸ್ತಕ ಬಿಡುಗಡೆಗೊಳಿಸುತ್ತಿದೆ.
ಸಿದ್ದು ನಿಜಕನಸುಗಳು- ಸಂಪುಟ 1 ನಗರದ ಪುರಭವನದಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಬಿಡುಗಡೆಯಾಗುತ್ತಿದೆ. ಉನ್ನತ ಶಿಕ್ಷಣ ಸಚಿವ ಸಿ.ಎನ್ ಅಶ್ವಥನಾರಾಯಣ ಅವರು ಅಧ್ಯಕ್ಷತೆ ಜೊತೆಗೆ ಕೃತಿ ಬಿಡುಗಡೆ ಮಾಡುತ್ತಿದ್ದಾರೆ. ಈ ಮೂಲಕ ಮತ್ತೊಂದು ರೀತಿಯ ರಾಜಕೀಯ ಶುರುವಾಗಿದೆ.
ಮೈಸೂರು ರಂಗಾಯಣದ ನಿರ್ದೇಶದ ಅಂಡಂಡ ಕಾರ್ಯಪ್ಪ ‘ಟಿಪ್ಪು ನಿಜಕನಸುಗಳು’ ನಾಟಕ ರಚಿಸಿ ರಂಗಪ್ರಯೋಗ ಮಾಡಿದರು. ಆಗಲೂ ವಿವಾದ ಶುರುವಾಯಿತು. ಅದರ ಹಿಂದಿನ ಉದ್ದೇಶ ಸಹ ಜನರು ಅರ್ಥ ಮಾಡಿಕೊಂಡರು. ಈಗ ಬಿಜೆಪಿ ಅದೆ ರೀತಿ ಸಿದ್ದು ನಿಜಕನಸುಗಳು ಪುಸ್ತಕ ಮಾಡಿದೆ. ಟಿಪ್ಪು ಜಯಂತಿಯ ಸಂದರ್ಭದ ಸಿದ್ದರಾಮಯ್ಯನವರ ಫೋಟೋವನ್ನು ಮುಖಪುಟಕ್ಕೆ ಬಳಸಿಕೊಂಡಿದೆ. ಇದರೊಂದಿಗೆ ಸಿದ್ದರಾಮಯ್ಯ ವರ್ಸಸ್ ಬಿಜೆಪಿ ವಾಕ್ಸಮರ ಜೋರಾಗಲಿದೆ.