ಪ್ರಜಾಸ್ತ್ರ ಸುದ್ದಿ, ನಾಗೇಶ ತಳವಾರ
ಸಿಂದಗಿ: ತಾಲೂಕು ವಿಧಾನಸಭೆ ಉಪ ಚುನಾವಣೆಯ ಪ್ರಚಾರ ಕೊನೆಯ ಹಂತಕ್ಕ ಬಂದಿದೆ. ಅಕ್ಟೋಬರ್ 28ರಂದು ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಹೀಗಾಗಿ ರಾಜಕೀಯ ಪಕ್ಷಗಳ ಅಬ್ಬರ ಜೋರಾಗಿದೆ. ರಾಜಕೀಯ ನಾಯಕರ ಬೃಹತ್ ಸಮಾವೇಶ, ಸಭೆ, ರ್ಯಾಲಿಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುತ್ತಿದ್ದಾರೆ. ಇದಕ್ಕೆ ಕಾರಣ ನೋಟು ಮಹಿಮೆ ಎನ್ನುತ್ತಿದ್ದಾರೆ.
ಪಟ್ಟಣದ ಜನತೆಯ ಜೊತೆಗೆ ಹಳ್ಳಿ ಹಳ್ಳಿಯ ಜನರು ಪಕ್ಷಗಳ ಬಾವುಟ ಹಿಡಿದುಕೊಂಡು ಜೈಕಾರ ಹಾಕುತ್ತಿದ್ದಾರೆ. ಈ ಬಗ್ಗೆ ಬಣ್ಣ ಬಣ್ಣದ ಮಾತುಗಳು ಕೇಳಿ ಬರುತ್ತಿವೆ. ಅನೇಕರು ಮುಂಜಾನೊಂದು ಪಕ್ಷದ ಬಾವುಟ ಹಿಡಿದು ಜೈಕಾರ ಹಾಕಿದರೆ, ಮಧ್ಯಾಹ್ನ ಮತ್ತೊಂದು ಪಕ್ಷದ ಬಾವುಟ ಹಿಡಿದು ಓಡಾಡುತ್ತಾರೆ ಅನ್ನೋ ಮಾತುಗಳು ಹಳ್ಳಿ ಕಟ್ಟೆಯ ಮೇಲೆ ಪಿಸುಗುಟ್ಟುತ್ತಿವೆ.
ಇನ್ನು ಪಕ್ಷಗಳು ಅಲ್ಲಲ್ಲಿ ನಿರ್ಮಿಸಿರುವ ಕಚೇರಿಯ ಸುತ್ತಾಮುತ್ತಾ ಸಂಜೆ ಒಂದು ಸುತ್ತು ಹೊಡೆದು ಬಂದರೆ ಮದ್ಯ ಸೇವನೆ ಜೋರಾಗಿಯೇ ನಡೆದಿರುತ್ತೆ. ಅವರೆಷ್ಟು ಕೊಟ್ಟರು ಇವರೆಷ್ಟು ಕೊಟ್ಟರು ಅನ್ನೋ ಮಾತುಗಳಿಗೇನೂ ಕಡಿಮೆಯಿಲ್ಲ. ಹೀಗಾಗಿ ಸಾಮಾನ್ಯ ಜನರ ಬಾಯಿಯಲ್ಲೂ ಕೋಟಿ ಕೋಟಿ ರೊಕ್ಕದ ಮಾತುಗಳು ಕೇಳಿ ಬರುತ್ತಿರುವುದು ಮಾತ್ರ ಸತ್ಯ.