ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಬಿಸಿಲು ಹೆಚ್ಚಾಗ್ತಿದೆ. 43 ಡಿಗ್ರಿಯಿಂದ 45.3 ಡಿಗ್ರಿವರೆಗೂ ಬಿಸಿಲು ಕಾಣಿಸಿಕೊಳ್ತಿದೆ. ಸದಾ ಬಿಸಿಗಾಳಿ ಬೀಸ್ತಿದ್ದು, ಜನರು ಹೊರಗೆ ಓಡಾಡುವುದಕ್ಕೂ ಕಷ್ಟಪಡಬೇಕಾಗಿದೆ. ಒಂದ್ಕಡೆ ಕರೋನಾ ಕಾಟ, ಇನ್ನೊಂದ್ಕಡೆ ಕಡುತಾಪಕ್ಕೆ ಕಂಗಾಲಾಗಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ 45.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇದು ಗರಿಷ್ಠ ಮಟ್ಟದಲ್ಲಿದ್ದು, ಮುಂದಿನ ಎರಡ್ಮೂರು ದಿನಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಹೀಗಾಗಿ ಗುಮ್ಮಟನಗಿರಿಯ ಜನ ಮನೆಯಲ್ಲಿದ್ರೂ ವಿಲವಿಲ ಒದ್ದಾಡುವ ಸ್ಥಿತಿ ನಿರ್ಮಾಣವಾಗಿದೆ.
ಇತ್ತ ಮಂಡ್ಯದಲ್ಲಿ ಸಂಜೆ 7ರ ನಂತರವೂ ಸೂರ್ಯ ಗೋಚರಿಸ್ತಿದ್ದಾನಂತೆ. ಕಳೆದ ಮೂರ್ನಾಲ್ಕು ದಿನಗಳಿಂದ ಸಂಜೆ 7.15ರ ವರೆಗೂ ಹಗಲಿನಲ್ಲಿ ಕಾಣುವಷ್ಟು ಪ್ರಕಾಶಮಾನವಾಗಿ ಸೂರ್ಯ ಕಾಣಿಸಿಕೊಂಡಿದ್ದಾನಂತೆ. ಕೆ.ಆರ್ ಪೇಟೆ ತಾಲೂಕಿನ ಹೆರಗನಹಳ್ಳಿ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿದೆ. ಇದಕ್ಕೆ ಕಾರಣ ಹುಡುಕುತ್ತಿದ್ದಾರೆ.
ಒಟ್ಟಿನಲ್ಲಿ ಹಗಲು ರಾತ್ರಿ ಎನ್ನದೆ ಬಿಸಿಲಿನ ಝಳ ಜೋರಾಗಿದೆ. ರಾತ್ರಿ 8ಗಂಟೆ ದಾಟಿದ್ರೂ ಬಿಸಿಗಾಳಿ ಸೂಸುತ್ತಲೇ ಇರುತ್ತೆ. ಒಂದಿಷ್ಟು ತಂಪುಗಾಳಿ ಬೀಸಬಹುದೆಂದು ಜನರು ಹೊರಗೆ ಬಂದ್ರೆ, ಬಿಸಿಗಾಳಿಗೆ ಏನು ಅನಾಹುತವಾಗುತ್ತೋ ಎಂದು ಹೊರ ಬರಲು ಹಿಂದುಮುಂದು ನೋಡಬೇಕಾಗಿದೆ.