ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸ್ಯಾಂಡಲ್ ವುಡ್ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಬ್ಯಾಂಕಾಕ್ ನಲ್ಲಿ ಇಂದು ಮುಂಜಾನೆ ಮೃತಪಟ್ಟಿದ್ದಾರೆ. ಸಂಬಂಧಿಯೊಂದಿಗೆ ಬ್ಯಾಂಕಾಕ್ ಪ್ರವಾಸಕ್ಕೆ ಮೂರು ದಿನಗಳ ಹಿಂದೆ ಹೋಗಿದ್ದರು. ಶೂಟಿಂಗ್ ಮುಗಿಸಿಕೊಂಡು ಪತಿ ವಿಜಯ್ ರಾಘವೇಂದ್ರ ಅವರೊಂದಿಗೂ ಕೂಡಿಕೊಂಡಿದ್ದರು. ಆದರೆ, ಇಂದು ಮುಂಜಾನೆ ಮೃತಪಟ್ಟಿರುವ ಸುದ್ದಿ ತಿಳಿದು ಬಂದಿದೆ.
ಬ್ಯಾಂಕಾಕ್ ನಲ್ಲಿ ಮರಣೋತ್ತಾರ ಪರೀಕ್ಷೆ ಮುಗಿದಿದ್ದು, ನಾಳೆ ಸಂಜೆಯೊಳಗೆ ಪಾರ್ಥಿವ ಶರೀರ ಬೆಂಗಳೂರು ತಲುಪಲಿದೆ. ನಂತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಈಡಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿಸಲಾಗಿದೆ. ಬೆಂಗಳೂರು ಅಥವ ಬೆಳ್ತಂಗಡಿಯಲ್ಲಿ ಅಂತ್ಯಕ್ರಿಯೆ ಎನ್ನುವುದು ಪತಿ ವಿಜಯ್ ರಾಘವೇಂದ್ರ ಅವರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಎಂದು ಸ್ಪಂದನಾ ದೊಡ್ಡಪ್ಪ, ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.
ನಟ ವಿಜಯ್ ರಾಘವೇಂದ್ರ ಸಹೋದರ, ನಟ ಮುರುಳಿ ಮಾತನಾಡಿ, ಅತ್ತಿಗೆ ರಾತ್ರಿ ಮಲಗಿದವರು ಮತ್ತೆ ಮೇಲೆ ಎದ್ದಿಲ್ಲ. ಹೃದಯಘಾತವಾಗಿದೆ ಅನ್ನೋದು ಸಧ್ಯಕ್ಕೆ ಗೊತ್ತಿರುವುದು. ಅಲ್ಲಿಂದ ಬಂದ ಮೇಲೆ ಗೊತ್ತಾಗಲಿದೆ ಅಂತಾ ಹೇಳಿದರು. ಕನ್ನಡ ಚಿತ್ರರಂಗದವರು, ರಾಜಕೀಯದವರು, ವಿಜಯ್ ರಾಘವೇಂದ್ರ ಅಭಿಮಾನಿಗಳು ಸೇರಿ ನಾಡಿನ ಜನತೆ ಕಂಬನಿ ಮಿಡಿದಿದೆ.