ಪ್ರಜಾಸ್ತ್ರ ಸುದ್ದಿ
ವಿಜಯಪುರ: ಜಿಲ್ಲೆಯಲ್ಲಿ ಈಗ ಕಬ್ಬಿನ ಕಟಾವು ಕೆಲಸ ಜೋರಾಗಿದೆ. ಹೀಗಾಗಿ ಶುಗರ್ ಫ್ಯಾಕ್ಟರಿಗಳಿಗೆ ಕಬ್ಬು ಕಳಿಸುವ ಕೆಲಸ ಜೋರಾಗಿದೆ. ಈ ಕಾರಣಕ್ಕೆ ನಿತ್ಯ ಹಗಲು ರಾತ್ರಿ ಎನ್ನದೆ ಸಾವಿರಾರು ಟ್ರ್ಯಾಕ್ಟರ್ ಗಳ ಮೂಲಕ ಕಬ್ಬನ್ನು ಕಾರ್ಖಾನೆಗಳಿಗೆ ಕಳುಹಿಸಿಕೊಡಲಾಗುತ್ತಿದೆ. ಹೀಗೆ ಹೋಗುವ ಟ್ರ್ಯಾಕ್ಟರ್ ಗಳು ಎರಡ್ಮೂರು ಟ್ರ್ಯಾಲಿ ಮೂಲಕ ಕಬ್ಬು ಸಾಗಾಟ ನಡೆಸುತ್ತಿವೆ.
ಅತಿಯಾದ ಕಬ್ಬನ್ನು ಹೇರಿಕೊಂಡು ಎರಡ್ಮೂರು ಟ್ರ್ಯಾಲಿ ಬಳಸುತ್ತಿರುವುದರಿಂದ ಸಿಂದಗಿ-ಆಲಮೇಲ ರಸ್ತೆಯ ಮಧ್ಯದಲ್ಲಿ ವಾಹನಗಳು ಕೆಟ್ಟು ನಿಲ್ಲುತ್ತಿವೆ. ಇದರಿಂದಾಗಿ ಸಿಂದಗಿ-ಆಲಮೇಲ ರಸ್ತೆಯ ನಡುವೆ ಅಲ್ಲಲ್ಲಿ ಟ್ರ್ಯಾಲಿಗಳನ್ನು ಬಿಟ್ಟು ಹೋಗಲಾಗುತ್ತಿದೆ. ಇದರ ಪರಿಣಾಮ ವಾಹನಗಳ ಸಂಚಾರಕ್ಕೆ ತೊಂದರೆಯಾಗುವುದರ ಜೊತೆಗೆ ಅಪಘಾತಕ್ಕೆ ಆಹ್ವಾನ ನೀಡುತ್ತಿವೆ.
ರೋಡ್ ಮಧ್ಯದಲ್ಲಿ ಹೀಗೆ ಟ್ರ್ಯಾಲಿ ಬಿಟ್ಟು ಹೋಗುವುದರಿಂದ ಎದುರು ಬದುರು ಬರುವ ವಾಹನಗಳ ಮಧ್ಯೆ ಅಪಘಾತವಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಈ ಬಗ್ಗೆ ಸಂಬಂಧಪಟ್ಟವರು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಅಂತಿದ್ದಾರೆ ಸಾರ್ವಜನಿಕರು.