ತುಮಕೂರು: ಟಿಕ್ ಟಾಕ್ ವ್ಯಸನಿ ಕೇರಳ ಮೂಲದ ಯುವತಿ ಸಾವು ಮರೆಯುವ ಮುನ್ನವೇ, ಮತ್ತೊಂದು ಘಟನೆ ರಾಜ್ಯದಲ್ಲಿ ನಡೆದಿದೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆ ಗ್ರಾಮದ ಯುವಕ ಇದೀಗ ಸಾವು ಬದುಕಿನ ನಡುವೆ ಹೋರಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ಏನೋ ಮಾಡಲು ಹೋಗಿ ಇನ್ನೇನೋ ಮಾಡಿಕೊಂಡ ತಪ್ಪಿಗೆ ಕುಮಾರ್ ಅನ್ನೋ ಯುವಕನ ಸ್ಪೈನಲ್ ಕಾರ್ಡ್ ಮುರಿದು ಹೋಗಿದೆ. ಕಳೆದ ಶನಿವಾರ ಗಾರ್ಡನ್ ವೊಂದರಲ್ಲಿ ಸ್ನೇಹಿತರ ಜೊತೆ ಸಾಹಸ ಮಾಡಿ, ಅದನ್ನ ಟಿಕ್ ಟಾಕ್ ನಲ್ಲಿ ತೋರಿಸಲು ಹೋಗಿ ಕುತ್ತಿಗೆಯನ್ನ ಮುರಿದುಕೊಂಡಿದ್ದಾನೆ. ಈ ಭಯಾನಕ ವಿಡಿಯೋ ನೋಡಿದ್ರೆ, ಟಿಕ್ ಟಾಕ್ ಪ್ರಿಯರ ಎದೆ ಝಲ್ ಎನ್ನುತ್ತೆ.
ಬಡತನದಲ್ಲಿ ಬೆಳೆದಿರುವ ಹುಡ್ಗ ಆರ್ಕೆಸ್ಟ್ರಾ ಮೂಲಕ ಒಂದಿಷ್ಟು ಹಣ ಸಂಪಾದನೆ ಮಾಡ್ತಿದ್ದ, ಸಾಹಸ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಲು ಹೋದಾಗ, ಇಂಥಾ ದುರ್ಘಟನೆ ನಡೆದಿದೆ. ಚಿಕಿತ್ಸೆಗೆ ಬರೋಬ್ಬರಿ 10 ಲಕ್ಷ ರೂಪಾಯಿ ಖರ್ಚಾಗುತ್ತೆ ಅಂತಾ ಡಾಕ್ಟರ್ ತಿಳಿಸಿದ್ದಾರೆ.
ಮನೆಗೆ ಆಸರೆಯಾಗಿದ್ದ ಮಗ ಇದೀಗ ಸಾವು ಬದುಕಿನ ನಡುವೆ ಹೋರಾಡ್ತಿದ್ದು, ಆತನ ಚಿಕಿತ್ಸೆಗೆ ಹಣ ಹೊಂದಿಸಲು ಆಗದೇ.. ಅತ್ತ ಮಗನ ಸ್ಥಿತಿ ನೋಡಿ ಏನು ಮಾಡಬೇಕೆಂದು ತೋಚದೆ ಇಡೀ ಕುಟುಂಬ ಕಣ್ಣೀರಿನಲ್ಲಿ ಕೈತೊಳಿಯುತ್ತಿದೆ.