ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಭಾನುವಾರ ನಿಜಕ್ಕೂ ಸಾವಿನ ದಿನವಾಗಿದೆ. ಯಾಕಂದರೆ, ರಾಜ್ಯದ ವಿವಿಧ ಕಡೆ ಭೀಕರ ಅಪಘಾತಗಳು ಸಂಭವಿಸಿದ್ದು, ಬರೋಬ್ಬರಿ 18 ಜನರು ಮೃತಪಟ್ಟಿದ್ದಾರೆ. ಹೀಗಾಗಿ ಈ ದಿನ ನಿಜಕ್ಕೂ ಅತ್ಯಂತ ಕರಾಳ ದಿನ ಅಂದರೂ ತಪ್ಪಾಗಲಾರದು. ಎಲ್ಲೆಲ್ಲಿ ಎಷ್ಟು ಜನರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಅನ್ನೋದು ಇಲ್ಲಿದೆ.
ಕ್ರೂಸರ್ ಪಲ್ಟಿಯಾಗಿ 7 ಜನರು ದುರ್ಮರಣ ಹೊಂದಿದ ಘಟನೆ ಬೆಳಗಾವಿ ಜಿಲ್ಲೆಯ ಕಣಬರಗಿ ಹತ್ತಿರ ನಡೆದಿದೆ. ಇನ್ನು ಮೂವರ ಸ್ಥಿತಿ ಗಂಭೀರವಾಗಿದೆ. ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದ ಬಳ್ಳಾರಿ ರಸ್ತೆಯಲ್ಲಿ ಬೈಕ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಪತ್ನಿ ಸಾವನ್ನಪ್ಪಿದ್ದು, ಪತಿ ಸ್ಥಿತಿ ಗಂಭೀರವಾಗಿದೆ. ಭದ್ರಾವತಿ ಮೂಲದ ಇರ್ಫಾನಾ(47) ಸಾವನ್ನಪ್ಪಿದ್ದಾರೆ. ಇವರ ಪತಿ ಅಲಿ(55) ಸ್ಥಿತಿ ಗಂಭೀರವಾಗಿದೆ.
ರಾಯಚೂರಿನಲ್ಲಿ ಟ್ಯಾಂಕರ್ ವೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಓರ್ವ ಗಾಯಗೊಂಡಿದ್ದಾನೆ. ತಿಮ್ಮಾಪುರ ಗ್ರಾಮದ ತಿಪ್ಪಣ್ಣ(18), ಲಿಂಗಣ್ಣ(18) ಮೃತ ಯುವಕರು. ಉದಯ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ.
ಶಿವಮೊಗ್ಗದ ಹೊನ್ನಳ್ಳಿ ರಸ್ತೆಯಲ್ಲಿ ಕಾರ್ ಹಾಗೂ ವ್ಯಾನ್ ನಡುವೆ ಅಪಘಾತ ಸಂಭವಿಸಿ ಗರ್ಭಿಣಿ ಪತ್ನಿ ಹಾಗೂ ಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಮಲ್ಲಹಾಳ್ ಗ್ರಾಮದ ಧನಂಜಯ್ ಹಾಗೂ ಪತ್ನಿ ರೋಜಾ ಮೃತ ದುರ್ದೈವಿಗಳು. ಇನ್ನು ತಾಯಿ, ಅತ್ತಿಗೆ ಹಾಗೂ ಸ್ನೇಹಿತನಿಗೆ ಗಾಯಗಳಾಗಿವೆ.
ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆ ಸರಗೂರು ತಾಲೂಕಿನ ಶಾಂತಿನಿವಾಸ ಗ್ರಾಮದ ಹತ್ತಿರ ನಡೆದಿದೆ. ನಾಗಮ್ಮ ಹಾಗೂ ವಿಜಯೇಂದ್ರ ಮೃತ ದುರ್ದೈವಿಗಳು. ಮತ್ತೊಬ್ಬನಿಗೆ ಗಾಯಗಳಾಗಿವೆ.
ಬೈಕ್ ರೈಡಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಮತ್ತೊಂದು ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸವಾರನೊಬ್ಬ ಮೃತಪಟ್ಟ ಘಟನೆ ಕುಣಿಗಲ್ ತಾಲೂಕಿನ ಗವಿಮಠದ ಹತ್ತಿರ ನಡೆದಿದೆ. 27 ವರ್ಷದ ಸೂರಜ್ ಮೃತ ದುರ್ದೈವಿ.
ಇನ್ನು ನಾಗಮಂಗಲ ಪಟ್ಟಣದ ಚಾಮರಾಜನಗರ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿ ಎಂ.ಹೊಸೂರು ಗೇಟ್ ಹತ್ತಿರ ಲಾರಿ ಹಾಗೂ ಕಾರು ನಡುವೆ ಅಪಘಾತ ಸಂಭವಿಸಿ ಮೂವರು ಸಾವನ್ನಪ್ಪಿದ ಘಟನೆ ಶನಿವಾರ ರಾತ್ರಿ ನಡೆದಿದೆ.