ಬೆಂಗಳೂರು: ಬಿಬಿಎಂಪಿ ಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ಮೊದಲ ಹಂತದಲ್ಲಿಯೇ ಬಿಜೆಪಿಗೆ ಹಿನ್ನೆಡೆಯಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆಯನ್ನ ಮುಂದೂಡುವ ಪ್ರಯತ್ನವನ್ನ ಬಿಜೆಪಿ ಮಾಡಿತ್ತು. ಅದು ಫಲ ನೀಡಿಲ್ಲ. ಹೀಗಾಗಿ ಇಂದು ಬೆಳಗ್ಗೆ 11ಗಂಟೆಗೆ ಎಲೆಕ್ಷನ್ ನಡೆಯಲಿದೆ.
ಈಗಾಗ್ಲೇ ಬಿಬಿಎಂಪಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಿದೆ. ಬಿಜೆಪಿ ಏಕಾಂಗಿಯಾಗಿ ಪೈಪೋಟಿಗೆ ಇಳಿದಿದೆ. ಹೀಗಾಗಿ ಕಮಲ ಪಾಳೆಯಕ್ಕೆ ಪಕ್ಷೇತರ ಅಭ್ಯರ್ಥಿಗಳ ಬೆಂಬಲ ಬೇಕಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನ ಮೇಯರ್ ಹಾಗೂ ಉಪ ಮೇಯರ್ ಅಭ್ಯರ್ಥಿಗಳಾಗಿದ್ದಾರೆ. ದತ್ತಾತ್ರೇಯ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಆರ್.ಎಸ್ ಸತ್ಯನಾರಾಯಣ ಮೇಯರ್ ಅಭ್ಯರ್ಥಿ. ಪಾದಾರಾಯನಪುರ ವಾರ್ಡ್ ನ ಇಮ್ರಾನ ಪಾಷಾ ಜೆಡಿಎಸ್ ನಿಂದ ಉಪ ಮೇಯರ್ ಅಭ್ಯರ್ಥಿಯಾಗಿದ್ದಾರೆ.
ಜೋಗಪಾಳ್ಯ ವಾರ್ಡ್ ಸದಸ್ಯ ಎಂ.ಗೌತಮಕುಮಾರ ಬಿಜೆಪಿಯಿಂದ ಮೇಯರ್ ಅಭ್ಯರ್ಥಿಯಾಗಿದ್ದಾರೆ. ಮ್ಯಾಜಿಕ್ ನಂಬರ್ 129 ಇದೆ. ಪಾಲಿಕೆಯಲ್ಲಿ 198 ಸದಸ್ಯರಿದ್ದಾರೆ. ಮೇಯರ್ ಹಾಗೂ ಉಪ ಮೇಯರ್ ಎಲೆಕ್ಷನ್ ನಲ್ಲಿ 5 ಎಂಪಿ, 9 ರಾಜ್ಯಸಭಾ ಸದಸ್ಯರು, 23 ಶಾಸಕರು, 22 ವಿಧಾನ ಪರಿಷತ್ ಸದಸ್ಯರು ಸೇರಿ 257 ಜನ ಮತದಾನ ಮಾಡಲಿದ್ದಾರೆ.
ಬಿಜೆಪಿ 101 ಬಿಬಿಎಂಪಿ ಸದಸ್ಯರು, 4 ಎಂಪಿ, 2 ರಾಜ್ಯಸಭಾ ಸದಸ್ಯರು, 11 ಶಾಸಕರು ಹಾಗೂ 7 ಜನ ವಿಧಾನಪರಿಷತ್ ಸದಸ್ಯರು ಸೇರಿ 125 ಜನರನ್ನ ಹೊಂದಿದೆ. ಇನ್ನು ನಾಲ್ಕು ಮತಗಳು ಕಡಿಮೆ ಬೀಳುತ್ತವೆ.
ಇನ್ನು ಕಾಂಗ್ರೆಸ್ 104, ಜೆಡಿಎಸ್ 21 ಸದಸ್ಯರ ಬಲ ಹೊಂದಿದೆ. 7 ಜನ ಪಕ್ಷೇತರರು ಇದ್ದಾರೆ. ಹೀಗಾಗಿ ಮೇಯರ್ ಹಾಗೂ ಉಪ ಮೇಯರ್ ಪಟ್ಟ ಮೈತ್ರಿ ಪಾಳೆಯದಲ್ಲಿ ಉಳಿಯುತ್ತಾ? ಬಿಜೆಪಿ ಪಡೆಗೆ ಒಲಿಯುತ್ತಾ ಅನ್ನೋ ಕುತೂಹಲವಿದೆ.