ಪ್ರಜಾಸ್ತ್ರ ಸುದ್ದಿ
ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ಯೋಧ 31 ವರ್ಷದ ಶಿವಾನಂದ ಬಡಿಗೇರ ಅವರು ಜಮ್ಮು-ಕಾಶ್ಮೀರದಲ್ಲಿ ಕರ್ತವ್ಯದಲ್ಲಿದ್ದಾಗ ಸಾವನ್ನಪ್ಪಿದ್ದಾರೆ. ಶಾರ್ಟ್ ಸರ್ಕಿಟ್ ನಿಂದಾಗಿ ಯೋಧ ಬಡಿಗೇರ ಅವರು ಮೃತಪಟ್ಟಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಒಂದೂವರೆ ವರ್ಷದ ಹಿಂದೆಯಷ್ಟೇ ತಾಳಿಕೋಟೆ ತಾಲೂಕಿನ ತಂಬಗಿ ಗ್ರಾಮದ ಪುಷ್ಪಾ ಎಂಬುವರೊಂದಿಗೆ ಶಿವಾನಂದ ಅವರ ಮದುವೆಯಾಗಿತ್ತು. ಬಾಂಗ್ಲಾ ಹಾಗೂ ಚೀನಾ ಗಡಿಯಲ್ಲಿ ಕರ್ತವ್ಯ ನೆರವೇರಿಸಿದ್ದ ಇವರು, ಸಧ್ಯ ಜಮ್ಮು-ಕಾಶ್ಮೀರದ ಗಡಿಯಲ್ಲಿದ್ದರು.
ಯೋಧನ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಕೇವಲ ಒಂದುವರೆ ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ ಪತ್ನಿಯ ನೋವು ಹೇಳತೀರದು. ಆದಷ್ಟು ಬೇಗ ಮಗನ ಪಾರ್ಥಿವ ಶರೀರ ತರಿಸುವಂತೆ ಜಿಲ್ಲಾಡಳಿತಕ್ಕೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.