15 ವರ್ಷಗಳ ಹಿಂದಿನ ಕೊಲೆ ಕೇಸ್: ಪತ್ನಿ ಸೇರಿ ಐವರ ಬಂಧನ

395

ಪ್ರಜಾಸ್ತ್ರ ಸುದ್ದಿ

ಗಂಗಾವತಿ: ಬರೋಬ್ಬರಿ 15 ವರ್ಷಗಳ ಹಿಂದೆ ನಡೆದ ಕೊಲೆ ಪ್ರಕರಣವನ್ನ ಬೇಧಿಸಿರುವ ಪೊಲೀಸ್ರು ಐವರು ಆರೋಪಗಳನ್ನ ಬಂಧಿಸಿದ್ದಾರೆ. ಕೊಲೆಯಾದ ವ್ಯಕ್ತಿಯ ಪತ್ನಿ ಲಕ್ಷ್ಮಿ ಸಿಂಗ್, ಈಕೆಗೆ ಸಹಕಾರ ನೀಡಿದ ಬಾಬಾ ಜಾಕೀರ, ಅಮ್ಜದ ಖಾನ, ಅಬ್ದುಲ ಆಫೀಜ, ಶಿವನಗೌಡನನ್ನ ಬಂಧಿಸಲಾಗಿದೆ.

ಜಯನಗರದ ಶಂಕರ ಸಿಂಗ್ ಎಂಬಾತನನ್ನ ಕೊಲೆ ಮಾಡಿ ಮನೆಯಲ್ಲಿಯೇ ಹೂತು ಹಾಕಲಾಗಿತ್ತು. ಈ ಬಗ್ಗೆ ಮಗಳು ಪೊಲೀಸ್ರಿಗೆ ದೂರು ನೀಡಿದ್ಳು. ತನಿಖೆ ನಡೆಸಿದ ಪೊಲೀಸ್ರು ಐದು ಜನರನ್ನ ಬಂಧಿಸಿದ್ದಾರೆ.

ಕೊಲೆ ಹಿಂದಿನ ರಹಸ್ಯ

ಲಕ್ಷ್ಮೀ ಸಿಂಗ್ ಹಾಗೂ ಆರೋಪಿ ಅಮ್ಜದ ಖಾನ ಜೊತೆ ಅಕ್ರಮ ಸಂಬಂಧವಿರುತ್ತೆ. ಇದನ್ನ ತಿಳಿದ ಗಂಡನಿಗೆ ನಿದ್ರೆ ಮಾತ್ರೆ ನೀಡ್ತಾಳೆ. ಬಳಿಕ ಆತನನ್ನ ಹಗ್ಗದಿಂದ ಕಟ್ಟಿ ಕೊಲೆ ಮಾಡಲಾಗುತ್ತೆ. ಈ ಘಟನೆ ನಡೆದಿದ್ದು 2005ರಲ್ಲಿ. ಮಕ್ಕಳನ್ನು ಊರಿಗೆ ಕಳುಹಿಸಿ ಹಂತಕಿ ಲಕ್ಷ್ಮೀ ಸಿಂಗ್ ಈ ಸ್ಕೆಚ್ ಹಾಕಿರ್ತಾಳೆ.

ಕೊಲೆ ಮಾಡಿದ ಬಳಿಕ ಮನೆಯ ಕಾಂಪೌಂಡ್ ಒಳೆಗೆಯೇ ತಗ್ಗು ತೆಗೆದು ಶವವನ್ನ ಮುಚ್ಚಿ ಹಾಕಿರ್ತಾರೆ. ಮುಂದೆ 2015ರಲ್ಲಿ ಮನೆಯನ್ನ ಶಿವನಗೌಡ ಎಂಬುವವರಿಗೆ ಮಾರಿರುತ್ತಾಳೆ. ಮುಂದೆ ಶಿವನಗೌಡ ಶೌಚಾಲಯ ಕಟ್ಟಿಸುವ ಸಂಬಂಧ ತಗ್ಗು ತೋಡಿಸುವ ವೇಳೆ ಶವದ ಅವಶೇಷಗಳು ಪತ್ತೆಯಾಗುತ್ತವೆ. ಆಗ ಮನೆ ಖರೀದಿಸಿದ್ದ ಲಕ್ಷ್ಮೀ ಸಿಂಗ್ ಹಾಗೂ ಮಗಳನ್ನ ಕರೆಯಿಸಿ ವಿಚಾರಿಸುತ್ತಾನೆ.

ಹಂತಕಿ ಮತ್ತೆ ಅದನ್ನ ಮುಚ್ಚಿ ಹಾಕಲು ಶಿವನಗೌಡನ ಸಹಾಯ ಪಡೆದು ಮಗಳಿಗೆ ಹೆದರಿಸಿ, ಕಳೆಬರಹವನ್ನ ಹೊಸಪೇಟೆ ಹೊರವಲಯದಲ್ಲಿ ಸುಟ್ಟು, ಅದರ ಬೂದಿಯನ್ನ ತಳವಾರಘಟ್ಟದ ತುಂಗಭದ್ರಾ ನದಿಯಲ್ಲಿ ಬಿಟ್ಟು ಬಂದು ಕೈತೊಳೆದುಕೊಂಡಿರ್ತಾರೆ. ಭಯದಿಂದ ಸುಮ್ಮನಾಗಿದ್ದ ಮಗಳು ವಿದ್ಯಾಸಿಂಗ್ ಹಾಗೂ ತಾಯಿ ನಡುವೆ ಇತ್ತೀಚೆಗೆ ಜಗಳವಾಗುತ್ತೆ. ಬಳಿಕ ಆಕೆ ಪೊಲೀಸರ ಬಳಿ ಹೋಗಿ ರಕ್ಷಣೆ ಬೇಡುತ್ತಾಳೆ. ಅಲ್ಲಿಂದ ಕಥೆ ಬಿಚ್ಚಿಕೊಳ್ಳುತ್ತೆ. ಆಗ ಫಿಲ್ಡ್ ಗೆ ಇಳಿದ ಪೊಲೀಸ್ರು, ತನಿಖೆ ನಡೆಸಿ ಐವರನ್ನ ಕಂಬಿ ಹಿಂದೆ ತಳ್ಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!