ಪ್ರಜಾಸ್ತ್ರ ಸುದ್ದಿ
ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ನಂಬಿಹಳ್ಳಿ ಗ್ರಾಮದಲ್ಲಿ ನಾಗೇಶ್ ಎಂಬಾತ ಪತ್ನಿ ರಾಧಾಳನ್ನು ಎರಡು ದಿನಗಳ ಹಿಂದೆ ಕೊಲೆ ಮಾಡಿದ್ದಾನೆ. ನಂತರ ಮೂವರು ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಹೋಟೆಲ್ ವೊಂದರಲ್ಲಿ ಅವಿತುಕೊಂಡಿದ್ದ. ಇದು ಮುಂದೆ ದೊಡ್ಡ ಗಲಾಟೆಗೆ ಕಾರಣವಾಗಿದೆ.
ನಂಬಿಹಳ್ಳಿ ಗ್ರಾಮಸ್ಥರು, ಸುತ್ತಲಿನ ಗ್ರಾಮಸ್ಥರು ಆಗಮಿಸಿ ಆರೋಪಿ ನಾಗೇಶನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಆಗ ಆತ ಗ್ಯಾಸ್ ಸಿಲಿಂಡರ್ ಹಿಡಿದು ಒಳಗೆ ಬಂದರೆ ಇದನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಪೊಲೀಸರು ಬಂದು ಪರಿಸ್ಥಿತಿ ಹತೋಟಿಗೆ ತರಲು ನೋಡಿದರೂ ಸಾಧ್ಯವಾಗಿಲ್ಲ.
ಹೋಟೆಲ್ ಕಿಟಕಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ನೋಡಿದ್ದರು. ಇದನ್ನು ತಡೆದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಕಾನೂನು ಪ್ರಕಾರ ಶಿಕ್ಷೆ ಕೊಡಿಸುವುದಾಗಿ ಹೇಳಿದರು. ಆದರೆ, ಗ್ರಾಮಸ್ಥರು ಕ್ಯಾರೆ ಅನ್ನಲಿಲ್ಲ. ಆಗ ಲಾಠಿ ಚಾರ್ಜ್ ಮಾಡಲಾಗಿದೆ. ನಂತರ ಗಾಳಿಯಲ್ಲಿ 7 ಸುತ್ತು ಗುಂಡು ಹಾರಿಸಲಾಗಿದೆ. ಆರೋಪಿ ಪೊಲೀಸರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಹೀಗಾಗಿ ಎಸ್ಪಿ ನಾರಾಯಣ ಸೇರಿ 10 ಪೊಲೀಸರು ಗಾಯಗೊಂಡಿದ್ದಾರೆ. ಆತನ ಕೈ, ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.
ಇದೀಗ ಬರೋಬ್ಬರಿ 1 ಸಾವಿರಕ್ಕೂ ಹೆಚ್ಚು ಜನರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕಾರಣಕ್ಕೆ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಗ್ರಾಮಸ್ಥರು ಆತಂಕದಲ್ಲಿದ್ದಾರೆ.