ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಭರ್ಜರಿ ಬಹುಮತದೊಂದಿಗೆ ಕಾಂಗ್ರೆಸ್ ಸರ್ಕಾರ ರಚನೆ ಮಾಡಿದ್ದರೂ ಆಂತರಿಕ ಮನಸ್ಥಾಪಗಳು ಇದ್ದೇ ಇವೆ. ಇದು ಎಲ್ಲ ರಾಜಕೀಯ ಪಕ್ಷಗಳೊಗಿನ ಸಹಜ. ಹೀಗಾಗಿ ಆಗಾಗ ಸ್ವಪಕ್ಷೀಯರೆ ದಾಳಗಳನ್ನು ಉರುಳಿಸುವ ಮೂಲಕ ತಮ್ಮರನ್ನೇ ಇಕ್ಕಟ್ಟಿಗೆ ಸಿಲುಕಿಸುವ ಕೆಲಸ ಮಾಡುತ್ತಾರೆ. ಸಚಿವ ಕೆ.ಎನ್ ರಾಜಣ್ಣ ನೀಡಿದ ಹೇಳಿಕೆ ಇದೀಗ ಅದನ್ನೇ ಸೃಷ್ಟಿಸಿದೆ.
ರಾಜ್ಯದಲ್ಲಿ ಇನ್ನು 3 ಡಿಸಿಎಂ ಸ್ಥಾನಗಳನ್ನು ರಚಿಸಬೇಕು. ಬೇರೆ ಸಮುದಾಯದವರಿಗೆ ಆ ಸ್ಥಾನ ನೀಡಬೇಕು ಎಂದು ಸಚಿವ ಕೆ.ಎನ್ ರಾಜಣ್ಣ ಹೇಳಿಕೆ ನೀಡಿದ್ದಾರೆ. ಇದು ಸಹಜವಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಬಣವನ್ನು ಕಟ್ಟಿ ಹಾಕುವ ತಂತ್ರಗಾರಿಕೆ ಎನ್ನಲಾಗುತ್ತಿದೆ. ಯಾಕಂದರೆ, ಇತ್ತೀಚೆಗೆ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಮುಜುಗರ ತಂದಿದ್ದಾರೆ. ಇದರ ಹಿಂದೆ ಡಿ.ಕೆ ಶಿವಕುಮಾರ್ ಇದ್ದಾರೆ ಅನ್ನೋದು ರಾಜಕೀಯ ಪಡಸಾಲಿಗೆಯಲ್ಲಿನ ಮಾತು.
ಸಚಿವ ಕೆ.ಎನ್ ರಾಜಣ್ಣ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದಲ್ಲಿ ಗುರುಸಿಕೊಂಡವರು. ಹೀಗಾಗಿ ಇಲ್ಲಿ ಎರಡು ಬಣಗಳಿವೆ. ಒಬ್ಬರಿಗೊಬ್ಬರು ಕಟ್ಟಿ ಹಾಕುವ ಸಲುವಾಗಿಯೇ ರೀತಿಯ ಹೇಳಿಕೆಗಳನ್ನು ತಮ್ಮವರ ಕಡೆಯಿಂದ ಕೊಡಿಸುತ್ತಿದ್ದಾರಂತೆ. ಹೊಸದಾಗಿ ಡಿಸಿಎಂ ಸ್ಥಾನವನ್ನು ಹೈಕಮಾಂಡ್ ತೀರ್ಮಾನಿಸಿದರೆ, ಅವಕಾಶ ಕೊಟ್ಟರೆ ನಾನು ಸಿದ್ಧ ಎಂದು ಪಿಡಬ್ಲುಡಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಇನ್ನೊಂದು ಕಡೆ ಈ ವಿಚಾರವಾಗಿ ಪ್ರಶ್ನೆ ಕೇಳಿದ ಪತ್ರಕರ್ತರ ವಿರುದ್ಧವೇ ಡಿಸಿಎಂ ಡಿ.ಕೆ ಶಿವಕುಮಾರ್ ಹರಿಹಾಯ್ದಿದ್ದಾರೆ. ಯಾರ ಹತ್ತಿರ ಏನು ಕೇಳಬೇಕು ಎನ್ನುವುದು ತಿಳಿದುಕೊಳ್ಳಿ. ಬೇಕಿದ್ದರೆ ಸಂವಿಧಾನದ ಪ್ರತಿ ಕೊಡುತ್ತೇನೆ ಅಂತಾ ಕೆಂಡಕಾರಿದ್ದಾರೆ. ಬಿ.ಕೆ ಹರಿಪ್ರಸಾದ್ ಹೇಳಿಕೆಗೆ ಹೈಕಮಾಂಡ್ ಸ್ಪಷ್ಟನೆ ಕೇಳಿದೆ. ಕೆ.ಎನ್ ರಾಜಣ್ಣ ಹೇಳಿಕೆಗೆ ಸಿಎಂ ಸ್ಪಷ್ಟನೆ ಕೇಳಬೇಕು. ನಾನಲ್ಲ ಎನ್ನುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಇದು ಯಾವ ಸ್ವರೂಪ ಪಡೆದುಕೊಳ್ಳುತ್ತೆ ಕಾದು ನೋಡಬೇಕು.