ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ನಗರದ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಈ ವೇಳೆ ಧ್ವಜಾರೋಹಣ ನೆರವೇರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ಜನತೆಗೆ ಶುಭ ಕೋರಿದರು.
ಈ ವೇಳೆ ಮಾತನಾಡಿದ ಅವರು, ಬ್ರಿಟಿಷರ ದಾಸ್ಯದಿಂದ ಬಿಡಿಸಿದ, ತ್ಯಾಗ ಬಲಿದಾನ ಮಾಡಿದ ಮಹನೀಯರಿಗೆ ಗೌರವಪೂರ್ವಕ ನಮನಗಳು. ಮನುಷ್ಯರ ಜೀವಕ್ಕಿಂತ ಸ್ವತಂತ್ರ ದೊಡ್ಡದು ಎಂದು ತಿಳಿದುಕೊಂಡಿದ್ದರು. ಅವರೆಲ್ಲ ತ್ಯಾಗ ವ್ಯರ್ಥವಾಗದಂತೆ ದೇಶವನ್ನು ಅಭಿವೃದ್ಧಿ ಕಡೆ ತೆಗೆದುಕೊಂಡ ಹೋಗಬೇಕು. ಅದಕ್ಕಾಗಿ ಶಾಂತಿಯುತ ಸಮಾಜ ನಿರ್ಮಾಣ ಮುಖ್ಯ. ದುಷ್ಟರ ಆಟಗಳು ಬಹಳ ದಿನ ನಡೆಯುವುದಿಲ್ಲ ಎನ್ನುವುದಕ್ಕೆ ರಾಜ್ಯದ ಜನತೆ ಉತ್ತರಿಸಿದ್ದಾರೆ ಎಂದರು.
ಜಾತಿ, ಧರ್ಮಗಳ ಸಂಘರ್ಷ, ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರ ಸೇರಿದಂತೆ ಅನೇಕ ಕಾರಣಗಳಿಂದ ಜನರು ರೋಸಿ ಹೋಗಿದ್ದರು. ಹಿಂದೆ ನಮ್ಮ ಸರ್ಕಾರದ ಆಡಳಿತ ನಂತರ ಬಂದ ಆಡಳಿತದಲ್ಲಿ ಏರಿಕೆಯಾಗುತ್ತಿರುವ ಬಡತನವನ್ನು ಗಂಭೀರವಾಗಿ ಪರಿಗಣಿಸಿ, ಇದರ ನಿವಾರಣೆಗೆ ಸಾರ್ವತ್ರಿಕ ಮೂಲ ಆದಾಯ ಅನ್ನೋ ಹೊಸ ಪ್ರಯೋಗ ಮಾಡಲಾಗಿದೆ ಅಂತಾ ತಿಳಿಸಿದರು.
ಶಕ್ತಿ ಯೋಜನೆಯಿಂದ ನಿತ್ಯ 50-60 ಲಕ್ಷ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಗೃಹಜ್ಯೋತಿಯಿಂದ 2 ಕೋಟಿ ಗ್ರಾಹಕರಿಗೆ ಅನುಕೂಲವಾಗಿದೆ. 1.04 ಕೋಟಿ ಕುಟುಂಬಗಳು ಅನ್ನಭಾಗ್ಯ ಯೋಜನೆಯ ಲಾಭ ಪಡೆಯುತ್ತಿವೆ. ಇನ್ನು ಆಗಸ್ಟ್ 27ಕ್ಕೆ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗುತ್ತಿದ್ದು, 1.08 ಕೋಟಿ ಕುಟುಂಬಗಳ ಯಜಮಾನಿಯರು ನೋಂದಾಯಿಸಿಕೊಂಡಿದ್ದಾರೆ. 2022-23ನೇ ಶೈಕ್ಷಣಿಕ ಯೋಜನೆ ಅಂತ್ಯಗೊಂಡು 6 ತಿಂಗಳ ಬಳಿಕ ಯುವನಿಧಿ ಯೋಜನೆ ಜಾರಿಗೆ ಬರಲಿದೆ ಎಂದು ಮಾಹಿತಿ ನೀಡಿದರು.