ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ
ನವದೆಹಲಿ: ಡಿಸೆಂಬರ್ 22 ರಂದು ದೆಹಲಿಯ ಶಾಸ್ತ್ರಿ ಭವನದಲ್ಲಿ ಸಂಗಂ ಸಾಹಿತ್ಯದ(ಎಟ್ಟುತ್ತೊಗೈ ಮತ್ತು ಪತ್ತುಪ್ಪಾಟ್ಟು) 10 ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ಕೇಂದ್ರ ಶಿಕ್ಷಣ ಸಚಿವಾಲಯದ ರಾಜ್ಯ ಸಚಿವ ಡಾ. ಸುಭಾಸ್ ಸರ್ಕಾರ್ ಕೃತಿಗಳನ್ನು ಬಿಡುಗಡೆಗೊಳಿಸಿದರು. 9 ಕೃತಿಗಳು ಕನ್ನಡಕ್ಕೆ ಹಾಗೂ 1 ಹಿಂದಿಗೆ ಅನುವಾದಗೊಂಡಿದೆ.
ಒಟ್ಟು 10 ಕೃತಿಗಳಲ್ಲಿ 8 ಸಾವಿರ ಪುಟಗಳ 9 ಕೃತಿಗಳು ಕನ್ನಡಕ್ಕೆ ಬಂದಿದ್ದು, ಅದರ ಅನುವಾದಕರಾಗಿ ಪ್ರೊ. ತಾ.ಕೃಷ್ಣಮೂರ್ತಿ, ಡಾ.ಶಂಕರಿ.ಅ, ಪ್ರೊ.ಜಿ.ಸುಬ್ರಮಣಿಯನ್, ಪ್ರೊ.ಎನ್.ಕೃಷ್ಣಮೂರ್ತಿ, ಡಾ.ವನಜ ಕುಲಕರ್ಣಿ, ಡಾ.ಕೆ.ಮಲರ್ ವಿಳಿ(ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರು), ಡಾ.ರಂಗಸ್ವಾಮಿ(ಮದ್ರಾಸ್ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರು) ಅವರು ಕೆಲಸ ಮಾಡಿದ್ದಾರೆ. ಈ ಸಂಗಂ ಸಾಹಿತ್ಯದ ಒಟ್ಟು ಯೋಜನೆಯ ಸಂಚಾಲಕಾರಗಿ ಡಾ.ಆರ್.ಶ್ರೀನಿವಾಸನ್ ಕಾರ್ಯನಿರ್ವಹಿಸಿದ್ದಾರೆ.
ಡಾ.ಎಚ್.ಬಾಲಸುಬ್ರಹ್ಮಣ್ಯಂ ಮತ್ತು ಡಾ.ಕೆ. ನಾಚಿಮುತ್ತು ಅವರು ಹಿಂದಿಗೆ ತೊಲ್ಕಾಪ್ಪಿಯಂ ಕೃತಿಯನ್ನು ಅನುವಾದಿಸಿದ್ದಾರೆ. ತಮಿಳು ಶಾಸ್ತ್ರೀಯ ಕೇಂದ್ರ ಸಂಸ್ಥೆಯ ನಿರ್ದೇಶಕರಾದ ಚಂದ್ರಶೇಖರನ್ ಅವರ ನೇತೃತ್ವದಲ್ಲಿ ಈ ಕೃತಿಗಳು ಪ್ರಕಟಗೊಂಡಿವೆ.
ಈ ವೇಳೆ ಮಾತನಾಡಿದಕೇಂದ್ರ ಶಿಕ್ಷಣ ಸಚಿವಾಲಯದ ರಾಜ್ಯ ಸಚಿವ ಡಾ. ಸುಭಾಸ್ ಸರ್ಕಾರ್, “ಭಾರತೀಯ ಸಂಸ್ಕೃತಿಯ ದ್ಯೋತಕವಾದ ಭಾರತೀಯ ಭಾಷೆಗಳಲ್ಲಿ ಒಂದಾದ ತಮಿಳು ಭಾಷೆಯು ತನ್ನದೇ ಆದ ಒಂದು ಸ್ಥಾನವನ್ನು ಪಡೆದಿರುವುದಾಗಿಯೂ ತಮಿಳಿನ ಸಾಹಿತ್ಯ ಹಾಗೂ ಸಂಸ್ಕೃತಿಯು ಪ್ರಾಚೀನ ಕಾಲದಿಂದಲೂ ಉಳಿಸಿಕೊಂಡು ಬಂದಿರುವುದನ್ನು ನಾವು ಕಾಣಬಹುದು. ಅಲ್ಲದೆ ಸಂಗಂ ಸಾಹಿತ್ಯ ದ ಎಟ್ಟುತ್ತೊಗೈ ಮತ್ತು ಪತ್ತುಪ್ಪಾಟ್ಟು ಹಾಗೂ ತೊಲ್ಕಾಪ್ಪಿಯಂ ಎಂಬ ಕೃತಿಗಳು ತನ್ನದೇ ಆದ ಉನ್ನತ ಪರಂಪರೆಯನ್ನು ಉಳಿಸಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿ ಎಂದರು. ಅಲ್ಲದೆ, ಹೀಗೆ ಭಾರತದ ಎಲ್ಲ ಶಾಸ್ತ್ರೀಯ ಭಾಷೆಗಳು ಉಳಿದ ಭಾಷೆಗಳಿಗೆ ಅನುವಾದಗೊಳ್ಳಬೇಕು ಅನ್ನೋ ಅಭಿಪ್ರಾಯ ವ್ಯಕ್ತಪಡಿಸುವುದರ ಜೊತೆಗ ಈ ಯೋಜನೆಯನ್ನು ಕೈಗೆತ್ತಿಕೊಂಡ ಬೆಂಗಳೂರಿನ ತಮಿಳು ಸಂಘಕ್ಕೆ ಅಭಿನಂದನೆ ಸಲ್ಲಿಸಿದರು.
ಈ ವೇಳೆ ಡಾ.ಇ. ಸುಂದರಮೂರ್ತಿ, ಕೇಂದ್ರ ಶಿಕ್ಷಣ ಸಚಿವಾಲಯ ಅನುವಾದ ವಿಭಾಗದ ಮುಖ್ಯಸ್ಥರುಗಳಾದ ನೀನಾ ಪ್ರಸಾದ್, ವರದರಾಜನ್ ಅವರು ಉಪಸ್ಥಿತರಿದ್ದರು.