ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ
ಹಾಸನ: ರಂಗಭೂಮಿ ಕಲಾವಿದೆ, ನಟಿ ಪೂಜಾ ರಘುನಂದನ ಅವರಿಗೆ, 2020ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ರಂಗಭೂಮಿಯಲ್ಲಿ ಇವರು ಸಲ್ಲಿಸ್ತಿರುವ ಸೇವೆಯನ್ನ ಪರಿಗಣಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.
ನವೆಂಬರ್ 1ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪೂಜಾ ರಘುನಂದನ್ ಅವರು ಕಳೆದ ಒಂದು ದಶಕದಿಂದ ರಂಗಭೂಮಿ ಚಟುವಟಿಕೆಗಳಲ್ಲಿ ನಿರತರವಾಗಿ ತೊಡಗಿಸಿಕೊಂಡಿದ್ದಾರೆ.
ಹಲವಾರು ನಾಟಕಗಳಲ್ಲಿ ಅಭಿನಯಿಸಿರುವ ಇವರು, ರಂಗ ಸಂಘಟನೆ ಹಾಗೂ ಸಮಾಜ ಸೇವೆ ಸಹ ಮಾಡಿಕೊಂಡು ಬರ್ತಿದ್ದಾರೆ. PRSpecial ಎಂಬ ಯೂಟ್ಯೂಬ್ ಚಾನೆಲ್ ಮೂಲಕ ಅನೇಕ ಸಾಮಾಜಿಕ, ಸಾಂಸ್ಕೃತಿಕ ಸೇರಿದಂತೆ ವೈವಿಧ್ಯಮಯ ವಿಚಾರಗಳನ್ನು ರಾಜ್ಯದ ಜನತೆಗೆ ತಿಳಿಸುವ ಪ್ರಯತ್ನ ಮಾಡ್ತಿದ್ದಾರೆ. ಇದರ ಜೊತೆಗೆ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ ಅನುಭವ ಇದೆ.
ಮೂಲತಃ ಬೆಳಗಾವಿಯವರಾದ ಪೂಜಾ ರಘುನಂದನ, ರಾಜಕೀಯ ಜೀವನದಲ್ಲಿ ಸಾಕಷ್ಟು ಅವಕಾಶಗಳಿದ್ರೂ ಅವರ ಒಲವು ರಂಗಭೂಮಿಯತ್ತ ಹೆಚ್ಚು ವಾಲಿತು. ಹೀಗಾಗಿ ನಟನೆಯಲ್ಲಿ ಮುಂದುವರೆದ್ರು. ಪತಿ ಸೇರಿದಂತೆ ಅವರ ಇಡೀ ಕುಟುಂಬ ಇವರಿಗೆ ಪ್ರೋತ್ಸಾಹ ನೀಡುತ್ತಿದೆ. ಹೀಗಾಗಿ ಕಲಾ ಕ್ಷೇತ್ರದಲ್ಲಿ ಮುಂದುವರೆಯಲು ಸಾಧ್ಯವಾಗಿದೆ ಎಂದು ಹೇಳುತ್ತಾರೆ. ಇಂಥಾ ಸಾಧಕಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಖುಷಿಯ ಸಂಗತಿ.