ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಹಾಸನ ಸಂಸದ, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ, ಕಾಂಗ್ರೆಸ್ ನಾಯಕರು ಮಾಧ್ಯಮಗೋಷ್ಠಿ ನಡೆಸಿ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ರಾಷ್ಟ್ರೀಯ ಮಹಿಳಾ ಅಧ್ಯಕ್ಷೆ ಅಲ್ಕಾ ಲಂಬಾ ಮಾತನಾಡಿ, ಕಳೆದೊಂದು ವರ್ಷಗಳಿಂದ 00ಕ್ಕೂ ಹೆಚ್ಚು ರಾಜ್ಯಗಳಲ್ಲಿ 50 ಕ್ಕೂ ಹೆಚ್ಚು ನಾರಿಶಕ್ತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಸಾವಿರಾರು ಮಹಿಳೆಯೊಂದಿಗೆ ಮಾತನಾಡಿದ್ದೇನೆ. ಪ್ರತಿಯೊಂದು ರಾಜ್ಯದಲ್ಲಿ ಮಹಿಳೆಯರ ದೌರ್ಜನ್ಯ, ಅತ್ಯಾಚಾರ, ಸಾಮೂಹಿಕ ಅತ್ಯಾಚಾರದ ಬಗ್ಗೆ ಮಾತನಾಡಿದ್ದಾರೆ. ಹಾಸನ ಸಂಸದ, ಬಿಜೆಪಿ ಮೈತ್ರಿಯ ಪ್ರಜ್ವಲ್ ರೇವಣ್ಣ ಎಲ್ಲ ದಾಖಲೆ ಮುರಿದಿದ್ದಾರೆ. ಮಹಿಳಾ ಅಪರಾದ ಪ್ರಕರಣಗಳಲ್ಲಿ ಎಲ್ಲ ದಾಖಲೆ ಮುರಿದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಪ್ರದಾನಿ ಮೋದಿ ಭಾಷಣದಲ್ಲಿ ಕಾಂಗ್ರೆಸ್ ಪರಿವಾರವಾದ ಹಾಗೂ ಬೇಟಿ ಬಚಾವೋ ಬಗ್ಗೆ ಮಾತನಾಡುತ್ತಾರೆ ಎಂದು ಹೇಳುತ್ತಲೇ ಜೆಡಿಎಸ್ ಕುಟುಂಬ ರಾಜಕಾರಣದ ಫೋಟೋ ಪ್ರದರ್ಶಸಿದರು. ಅಲ್ಲದೇ ಬಿಜೆಪಿ ನಾಯಕ ಕುಲ್ದೀಪ್ ಸಿಂಗ್ ಸೆಂಗಲ್ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿದವರು, ಉತ್ತರ ಪ್ರದೇಶದ ರಾಮ್ ದುಲಾರೆ, ಬ್ರಿಜ್ ಭೂಷಣ್ ಚರಣ್, ಹರಿಯಾಣದ ಸಚಿವ ಸಂದೀಪ್ ಸಿಂಗ್ ಇವರ ವಿರುದ್ಧ ಅತ್ಯಾಚಾರ, ಲೈಂಗಿಕ ದೌರ್ಜನ್ಯದ ಆರೋಪಗಳಿವೆ. ಎಫ್ಐಆರ್ ಆಗಿದೆ. ಇವರ ಜೊತೆಗೆ ಇದೀಗ ಪ್ರಜ್ವಲ್ ರೇವಣ್ಣ ಹೆಸರು ಸೇರಿಕೊಂಡಿದೆ. ಇವರು ಮೋದಿ ಕಾ ಪರಿವಾರ. ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರೊಂದಿಗೆ ತಪ್ಪು ಕೆಲಸ ಮಾಡಿದ್ದಾರೆ ಎಂದು ಕಿಡಿ ಕಾರಿದರು.
ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಮಾತನಾಡಿ, ಕರ್ನಾಟಕದಲ್ಲಿ ನಮಗೆ ಇಂತಹ ಪರಿಸ್ಥಿತಿ ಬರುತ್ತೆ ಎಂದು ಯಾರೂ ಊಹೆ ಮಾಡಿರಲಿಲ್ಲ. ಬಹಳ ದುಃಖವಾಗುತ್ತೆ. ದೇವರಾಗಿ ಮಹಿಳೆಯರನ್ನು ಪೂಜೆ ಮಾಡ್ತಾರೆ. ನಮಗೆ ಪೂಜೆ ಬೇಡ. ಗೌರವ ಬೇಕು. ಸುರಕ್ಷತೆ ಬೇಕು ಎಂದರು.
ಈ ವೇಳೆ ಕಾಂಗ್ರೆಸ್ ರಾಜ್ಯ ಮಹಿಳಾ ಅಧ್ಯಕ್ಷೆ ಪುಷ್ಪಾ ಅಮರನಾಥ್, ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷೆ ಐಶ್ವರ್ಯ ಮಹಾದೇವ, ಕಾಂಗ್ರೆಸ್ ವಕ್ತಾರೆ ಭವ್ಯ ನರಸಿಂಹಮೂರ್ತಿ ಉಪಸ್ಥಿತರಿದ್ದರು.