ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ವಿಚಾರವಾಗಿ ಮಾತನಾಡುವಾಗ, ಹೆಳ್ಳಿ ತಾಯಿಯಂದಿರು ದಾರಿ ತಪ್ಪಿದ್ದಾರೆ ಎಂದು ಹೇಳಿದ್ದ ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಇಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಚಾರದ ಸಭೆಯಲ್ಲಿ ಗ್ಯಾರಂಟಿ ಕುರಿತು ಮಾತನಾಡಿದ್ದೇನೆ. ಎಲ್ಲಿಯೂ ಹೆಣ್ಮಕ್ಕಳಿಗೆ ಅವಮಾನ ಮಾಡಿಲ್ಲ. ಗ್ಯಾರಂಟಿಗಳಿಗೆ ಮಾರುಹೋಗಿ ಕಾಂಗ್ರೆಸ್ಸಿಗೆ ಮತ ಹಾಕಿದ್ದರಿಂದ ರಾಜ್ಯದಲ್ಲಿ ಸಂಪತ್ತಿನ ಲೂಟಿ, ಸಾಲದ ಹೊರೆ ಹೆಚ್ಚಾಗಿದೆ ಎಂದಿದ್ದೇನೆ. ಇದನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದರು.
ಮಹಿಳೆಯರನ್ನು ಗೌರವಿಸಿ ಸಾರಾಯಿ ನಿಷೇಧ ಮಾಡಿದ್ದೆ. ತಾಯಿಯಂದಿರು ಅನ್ನೋ ಗೌರವಸೂಚಕ ಪದ ಬಳಸಿಯೆ ಮಾತನಾಡಿದ್ದೇನೆ. ಅವಮಾನಕರ ಪದ ಬಳಸಿಲ್ಲ. ದಾರಿ ತಪ್ಪಿದ್ದಾರೆ ಎನ್ನುವುದು ಅಶ್ಲೀಲ ಪದವಲ್ಲ. ಮನೆಯಲ್ಲಿ ಮಕ್ಕಳಿಗೆ ದಾರಿ ತಪ್ಪಬೇಡಿ ಎಂದು ಹೇಳುವುದಿಲ್ಲವೆ ಅಂತಾ ಕೇಳಿದರು.
ನಾನು ದಾರಿ ತಪ್ಪಿದ್ದೇನೆ ಎಂದು ಕೆಲವರು ಹೇಳಿದ್ದಾರೆ. ಹೌದು, ನಾನು ವಿಧಾನಸಭೆಯಲ್ಲಿಯೇ ಇದನ್ನು ಹೇಳಿದ್ದೇನೆ. ನನ್ನ ಪತ್ನಿಯೇ ನನ್ನನ್ನು ತಿದ್ದಿದ್ದಾಳೆ. ಅದನ್ನು ತಿದ್ದುಕೊಂಡು ಮುನ್ನಡೆಯುತ್ತಿದ್ದೇನೆ. ಕಾಂಗ್ರೆಸ್ಸಿನವರಿಗೆ ನಾನು ಸವಾಲಾಗಿದ್ದೇನೆ. ಹೀಗಾಗಿ ಈ ರೀತಿಯ ತಂತ್ರಗಳನ್ನು ಮಾಡುತ್ತಿದ್ದಾರೆ ಎಂದರು.
ಕುಮಾರಸ್ವಾಮಿ ಹೇಳಿಕೆ ವಿರುದ್ಧ ಮಹಿಳಾ ಪರ ಸಂಘಟನೆಗಳು, ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು, ಕೈ ನಾಯಕರು ಸೇರಿ ಅನೇಕರು ಆಕ್ರೋಶ ಹೊರ ಹಾಕಿದ್ದಾರೆ. ಪ್ರತಿಭಟನೆ ಸಹ ನಡೆಸಿದರು.