ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಒಕ್ಕಲಿಗ ನಾಯಕತ್ವದ ಸಲುವಾಗಿ ಪ್ರಜ್ವಲ್ ರೇವಣ್ಣ ಪ್ರಕರಣ ಹೊರ ಹಾಕಲಾಗಿದೆ ಎಂದು ಕುಮಾರಸ್ವಾಮಿ ಆರೋಪಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಶನಿವಾರ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಒಕ್ಕಲಿಗ ನಾಯಕ ಎನಿಸಿಕೊಳ್ಳಲು ಇಷ್ಟವಿಲ್ಲ. ಕಾಂಗ್ರೆಸ್ ನಾಯಕ ಎನ್ನುವುದೇ ಸಾಕು ಎಂದಿದ್ದಾರೆ.
ಬಿಜೆಪಿ ಗಂಟೆಗೊಂದು ಮಾತನಾಡುತ್ತಾರೆ. ಅದೆ ರೀತಿ ಜೆಡಿಎಸ್ ನವರೂ ಮಾತನಾಡುತ್ತಿದ್ದಾರೆ. ಒಕ್ಕಲಿಗನಾಗಿ ಹುಟ್ಟಿದ್ದೇನೆ. ಸಮಾಜಕ್ಕೆ ಗೌರವ ಕೊಡುವುದು, ಸಹಾಯ ಮಾಡುವುದು ಕರ್ತವ್ಯ ಎಂದರು.
ಪ್ರಜ್ವಲ್ ರೇವಣ್ಣ ಪ್ರಕರಣ ಮೇ 7ರ ಬಳಿಕ ಎಲ್ಲಿಗೆ ಹೋಗುತ್ತೆ ಕಾದು ನೋಡಿ ಎಂದಿರುವ ಕುಮಾರಸ್ವಾಮಿ ಹೇಳಿಕೆಗೆ, ಮೇ 7ರ ತನಕ ಯಾಕೆ ಕಾಯಬೇಕು. ಇದು ಅವರ ಕುಟುಂಬದ ಆಂತರಿಕ ವಿಷಯ. ಕುಟುಂಬದೊಳಗಿನ ಜಗಳದಿಂದಾಗಿಯೇ ಪ್ರಜ್ವಲ್ ಪ್ರಕರಣ ಹೊರಗೆ ಬಂದಿದೆ. ಉಪ್ಪು ತಿಂದವರು ನೀರು ಕುಡಿಯಬೇಕು ಎಂದವರು ಯಾರು? ರೇವಣ್ಣ ಕುಟುಂಬ ಬೇರೆ, ನಮ್ಮ ಕುಟುಂಬ ಬೇರೆ ಎಂದವರು ಯಾರು? ರಾಜ್ಯದ ಜನರ ಕ್ಷಮೆ ಕೇಳಿದ್ದು ಯಾರು ಎನ್ನುವ ಮೂಲಕ ಪ್ರತ್ಯುತ್ತರ ನೀಡಿದರು.