ಪ್ರಜಾಸ್ತ್ರ ಸುದ್ದಿ
ನವದೆಹಲಿ: ದೆಹಲಿ ಅಬಕಾರಿ ನೀತಿ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಬಂಧನಕ್ಕೆ ಒಳಗಾಗಿರುವ ಬಿಆರ್ ಎಸ್ ನಾಯಕಿ ಕೆ.ಕವಿತಾ ನ್ಯಾಯಾಂಗ ಬಂಧನ ಅವಧಿಯನ್ನು ಏಪ್ರಿಲ್ 23ರ ತನಕ ವಿಸ್ತರಣೆ ಮಾಡಲಾಗಿದೆ.
ದೆಹಲಿಯ ರೊಸ್ ಅವೆನ್ಯೂ ಕೋರ್ಟ್ ನ ವಿಶೇಷ ನ್ಯಾಯಾಧೀಶ ಕಾವೇರಿ ಬವೇಜಾ ಅವರು ಏಪ್ರಿಲ್ 23ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದ್ದಾರೆ. ಹೀಗಾಗಿ ಅವರನ್ನು ತಿಹಾರ್ ಜೈಲಿಗೆ ಕಳುಹಿಸಲಾಗಿದೆ. ತನಿಖೆ ಅವರು ಸರಿಯಾಗಿ ಸ್ಪಂದಿಸುತ್ತಿಲ್ಲವೆಂದು ಸಿಬಿಐ ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದರು. ಇದರ ವಿರುದ್ಧ ಕವಿತಾ ಪರ ವಕೀಲರಾದ ನಿತೀಶ್ ರಣಾ, ದೀಪಕ್ ನಗರ್ ವಾದ ಮಂಡಿಸಿದರು.
ಮಾರ್ಚ್ 15ರಂದು ಹೈದರಾಬಾದ್ ನಲ್ಲಿ ಇಡಿ ಅಧಿಕಾರಿಗಳು ಬಂಧಿಸಿದ್ದರು. ನಂತರ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು. ಏಪ್ರಿಲ್ 11ರಂದು ಸಿಬಿಐ ಅಧಿಕಾರಿಗಳು ಅಲ್ಲಿಂದ ವಶಕ್ಕೆ ಪಡೆದಿದ್ದರು. 46 ವರ್ಷದ ಕೆ.ಕವಿತಾ ತೆಲಂಗಾಣ ಮಾಜಿ ಸಿಎಂ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿಯಾಗಿದ್ದಾರೆ. ದೆಹಲಿ ಅಬಕಾರಿ ನೀತಿಯಲ್ಲಿ ತಮಗೆ ಅನುಕೂಲವಾಗುವ ರೀತಿಯಲ್ಲಿ ನಿಬಂಧನೆಗಳನ್ನು ಮಾಡಲು ಆಪ್ ಗೆ 100 ಕೋಟಿ ಒದಗಿಸುವಲ್ಲಿ ಕವಿತಾ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನುವುದು ಸಿಬಿಐ ಆರೋಪ.