ಪ್ರಜಾಸ್ತ್ರ ಸುದ್ದಿ
ಮೈಸೂರು: ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಕೇಂದ್ರದ ಮಾಜಿ ಸಚಿವ, ಚಾಮರಾಜನಗರ ಸಂಸದ ವಿ.ಶ್ರೀನಿವಾಸ ಪ್ರಸಾದ್(76) ಸೋಮವಾರ ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೂತ್ರಕೋಶದ ಸೋಂಕಿನ ಕಾರಣದಿಂದಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಏಪ್ರಿಲ್ 22ರಂದು ದಾಖಲಿಸಲಾಗಿತ್ತು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ಬೆಳಗಿನ ಜಾವ ಸುಮಾರು 1.30ರ ಸುಮಾರಿಗೆ ನಿಧನರಾಗಿದ್ದಾರೆ.
ಮೈಸೂರಿನಲ್ಲಿರುವ ಜಯಲಕ್ಷ್ಮಿಪುರಂನಲ್ಲಿರುವ ನಿವಾಸಕ್ಕೆ ಮೃತದೇಹ ತೆಗೆದುಕೊಂಡು ಬರಲಾಗಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಪತ್ನಿ ಹಾಗೂ ಮೂವರು ಪುತ್ರಿಯರು, ಅಳಿಯಂದಿರು, ಅಪಾರ ಬಂಧು, ಮಿತ್ರರನ್ನು ಅಗಲಿದಿದ್ದಾರೆ.
ಕೆ.ಆರ್ ಕ್ಷೇತ್ರದಿಂದ 1974ರಲ್ಲಿ ರಾಜಕೀಯ ಪ್ರವೇಶಿಸಿದ್ದರು. 2 ಬಾರಿ ಶಾಸಕರು, 6 ಬಾರಿ ಸಂಸದರಾಗಿದ್ದರು. 1999ರಿಂದ 2004ರವರೆಗೆ ಕೇಂದ್ರ ಆಹಾರ ಖಾತೆ ಸಚಿವರಾಗಿದ್ದರು. 2013-16ರಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದರು. ಮುಂದೆ ಸಿದ್ದರಾಮಯ್ಯರೊಂದಿಗಿನ ಅಸಮಾಧಾನದಿಂದಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. 2019ರಲ್ಲಿ ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಸಂಸದರಾದರು.