ಪ್ರಜಾಸ್ತ್ರ ಸುದ್ದಿ
ಯಾದಗಿರಿ: ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅಶ್ಲೀಲ ವಿಡಿಯೋ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣ ಸಂಬಂಧ, ಪಕ್ಷದಿಂದ ಅಮಾನತುಗೊಳಿಸಬೇಕೆಂದು ಗುರುಮಠಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ ಆಗ್ರಹಿಸಿದ್ದಾರೆ.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಅವರಿಗೆ ಪತ್ರ ಬರೆದಿದ್ದು, ಈ ಪ್ರಕರಣದಿಂದ ಪಕ್ಷಕ್ಕೆ ತೀವ್ರ ಮುಜುಗರವಾಗುತ್ತಿದೆ. ವಿಡಿಯೋಗಳಲ್ಲಿ ಪ್ರಜ್ವಲ್ ರೇವಣ್ಣ ಕಾಣಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ತಪ್ಪಿತಸ್ಥರೆನ್ನುವ ಭಾವನೆ ಮೂಡಿದೆ. ಪಕ್ಷದ ಚಿಹ್ನೆ ಭತ್ತದ ತೆನೆ ಹೊತ್ತ ಮಹಿಳೆಯಾಗಿದ್ದಾಳೆ. ಇದು ನಿಮಗೆ ಮಹಿಳೆಯರ ಬಗೆಗಿನ ಗೌರವ ತೋರಿಸುತ್ತೆ. ಆದರೆ, ವಿಡಿಯೋ ಪ್ರಕರಣ ಪಕ್ಷಕ್ಕೆ ಮುಜುಗರ ತರುತ್ತಿದೆ.
ಸರ್ಕಾರ ಎಸ್ಐಟಿ ತನಿಖೆಗೆ ಒಪ್ಪಿಸಿದೆ. ನೀವು ಆಂತರಿಕ ಸಮಿತಿ ರಚನೆ ಮಾಡಿ. ಪಕ್ಷದ ಮುಜುಗರ ಹಾಗೂ ಎರಡನೇ ಹಂತದ ಚುನಾವಣೆ ವೇಳೆ ವ್ಯತಿರಕ್ತ ಪರಿಣಾಮ ಬೀರದಂತೆ ಸಂಸದ ಪ್ರಜ್ವಲ್ ರೇವಣ್ಣರನ್ನು ಕೂಡಲೇ ಪಕ್ಷದಿಂದ ಅಮಾನತುಗೊಳಿಸಿ ಎಂದು ಪತ್ರ ಬರೆದಿದ್ದಾರೆ.