ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಅಕಾಲಿಕ ನಿಧನ ಹೊಂದಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜೀವನಗಾಥೆಯನ್ನು ಶಾಲಾ ಮಕ್ಕಳ ಪಠ್ಯ ಪುಸ್ತಕದಲ್ಲಿ ತರುವ ಕುರಿತು ಸರ್ಕಾರದೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.
ಅಪ್ಪು ಜೀವನಗಾಥೆ ಎಲ್ಲರಿಗೂ ಸ್ಪೂರ್ತಿಯಾಗುವ ರೀತಿಯಲ್ಲಿದೆ. ಈ ಬಗ್ಗೆ ಸಂಘ ಸಂಸ್ಥೆಗಳಿಂದ ಪತ್ರಗಳು ಬರುತ್ತಿವೆ. ಬಾಲ ನಟನಾಗಿದ್ದಾಗಲೇ ರಾಷ್ಟ್ರ ಪಶಸ್ತಿ ಪಡೆದಿರುವುದು, ನಟನಾಗಿ ಒಳ್ಳೆಯ ಸಾಮಾಜಿಕ ಚಿತ್ರಗಳನ್ನು ನೀಡಿರುವುದು, ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡು 26 ಅನಾಥಾಶ್ರಮ, 19 ಗೋಶಾಲೆ, 16 ವೃದ್ಧಾಶ್ರಮ, 4,800 ಬಡಮಕ್ಕಳ ಓದಿನ ಖರ್ಚು ನೋಡಿಕೊಳ್ಳುವುದು ಸೇರಿದಂತೆ ಸಾಕಷ್ಟು ಸೇವೆ ಮಾಡಿದ್ದಾರೆ.
ಇದೆಲ್ಲವನ್ನು ಗಂಭೀರವಾಗಿ ಪರಿಗಣಿಸಿ 4 ಹಾಗೂ 5ನೇ ತರಗತಿ ಪಠ್ಯ ಪುಸ್ತಕದಲ್ಲಿ ಪುನೀತ್ ಅವರ ಜೀವನವನ್ನು ಪಾಠವಾಗಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವ ಕುರಿತು ಸಚಿವರು ಭರವಸೆ ನೀಡಿದ್ದಾರೆ.