ಪ್ರಜಾಸ್ತ್ರ ಸುದ್ದಿ
ನವದೆಹಲಿ: ತಮಿಳುನಾಡಿಗೆ ಪ್ರತಿ ದಿನ 5 ಸಾವಿರ ಕ್ಯೂಸೆಕ್ ನೀರು ಬಿಡಬೇಕು ಎಂದಿರುವ ಕಾವೇರಿ ನದಿ ನೀರು ನಿವರ್ಹಣಾ ಪ್ರಾಧಿಕಾರದ ಆದೇಶದ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
ಸಭೆಯ ಬಳಿಕ ಮಾತನಾಡಿದ ಸಿಎಂ, ನಮ್ಮಲ್ಲಿಯೇ ನೀರು ಇಲ್ಲದಿರುವಾಗ ತಮಿಳುನಾಡಿಗೆ ಎಲ್ಲಿಂದ ನೀರು ಬಿಡುವುದು. ಈ ಸಂಬಂಧ ಸೆಪ್ಟೆಂಬರ್ 21ರಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗುವುದು ಅಂತಾ ತಿಳಿಸಿದರು. ತಮಿಳುನಾಡಿಗೆ ನೀರು ಬಿಡಬಾರದು ಅನ್ನೋ ಕೆಟ್ಟ ಉದ್ದೇಶವಿಲ್ಲ. ನಮ್ಮಲ್ಲಿಯೇ ನೀರು ಇಲ್ಲದಿರುವಾಗ ಇದು ಹೇಗೆ ಸಾಧ್ಯ? ನಾಡು, ನುಡಿ, ಜಲ, ಭೂಮಿ, ಭಾಷೆ ಬಂದಾಗ ಎಲ್ಲರೂ ಒಗ್ಗಟ್ಟಾಗಬೇಕು ಅಂತಾ ಹೇಳಿದರು.
123 ವರ್ಷಗಳಲ್ಲಿಯೇ ಇಷ್ಟೊಂದು ಮಳೆ ಕೊರತೆ ಆಗಿರಲಿಲ್ಲ. 195 ತಾಲೂಕುಗಳು ಬರಪೀಡಿತ ಎಂದು ಘೋಷಿಸಿದ್ದೇವೆ. ಈಗ ಸಂಕಷ್ಟ ಸೂತ್ರ ಅಗತ್ಯ. ಸುಪ್ರೀಂ ಕೋರ್ಟಿನ ಹಿಂದಿನ ಆದೇಶವಿದೆ. ಮಳೆ ಸರಿಯಾಗಿದ್ದರೆ 108 ಟಿಎಂಸಿ ನೀರು ನಾವು ಕೊಡಬೇಕಿತ್ತು. ಮುಂದೆ ಮಳೆಯಾಗುತ್ತೆ ಎನ್ನುವ ಭರವಸೆಯೂ ಇಲ್ಲ. ಎರಡೂ ರಾಜ್ಯಗಳ ನಾಯಕರನ್ನು ಕರೆದು ಪ್ರಧಾನಿ ಮಾತನಾಡಬೇಕು. ಆದರೆ ನಾವು ನಾಳೆ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸುತ್ತೇವೆ ಎಂದರು.
ಈ ವೇಳೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಭಗವಂತ್ ಖೂಬಾ, ರಾಜೀವ್ ಚಂದ್ರಶೇಖರ್, ಶೋಭಾ ಕರಂದ್ಲಾಜೆ, ನಾರಾಯಣಸ್ವಾಮಿ, ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್, ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಹಾಗೂ ಸುಪ್ರೀಂ ಕೋರ್ಟ್ ವಕೀಲರು ಸೇರಿ ತಜ್ಞರಯ ಸಭೆಯಲ್ಲಿ ಉಪಸ್ಥಿತರಿದ್ದರು.