ಬೆಂಗಳೂರು: ಖಾಕಿ ಪಡೆಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡ್ತಿದ್ದು, ಔರಾದ್ಕರ್ ವರದಿ ಅನುಸಾರ ಪೊಲೀಸ್ರ ವೇತನ ಶ್ರೇಣಿ ಪರಿಷ್ಕರಣೆಗೆ ಸರ್ಕಾರ ಬದ್ಧವಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಎಸ್ಪಿಗಳು ಮತ್ತು ವಲಯ ಐಜಿಪಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದ ನಂತರ ಈ ವಿಷ್ಯ ತಿಳಿಸಿದ್ದಾರೆ. ಇದರ ಜೊತೆಗೆ ರಾಜ್ಯದಲ್ಲಿ ಡ್ರಗ್ಸ್, ಹಣ ವಂಚಕ ಕಂಪನಿಗಳ ದಂಧೆಗೆ ಕಡಿವಾಣ ಹಾಕಲು ಪೊಲೀಸ್ರಿಗೆ ಬೊಮ್ಮಾಯಿ ಆದೇಶಿಸಿದ್ದಾರೆ.
ನೋಂದಾಯಿತ ಕಂಪನಿಗಳಿಂದಲೇ ದೊಡ್ಡ ಮಟ್ಟದಲ್ಲಿ ಮೋಸವಾಗ್ತಿದೆ. ವಂಚನೆ ಪ್ರಕರಣದಲ್ಲಿ ಇಲ್ಲಿಯವರೆಗೂ ಹೂಡಿಕೆದಾರರಿಗೆ ಶೇಕಡ 19.12ರಷ್ಟು ಹಣ ವಾಪಸ್ ಕೊಡ್ತಿರುವುದು ತಿಳಿದಿದೆ. ಉಳಿದ ಪ್ರಕರಣಗಳ ತನಿಖೆ ಹಂತದಲ್ಲಿವೆ. ಅವುಗಳನ್ನ ಗಂಭೀರವಾಗಿ ಪರಿಗಣಿಸಿ ಸ್ಥಿರ ಮತ್ತು ಚರಾಸ್ತಿ ಜಪ್ತಿ ಮಾಡಿ ಹೂಡಿಕೆದಾರರಿಗೆ ತಲುಪಿಸಿ ಎಂದು ಡಿಜಿ-ಐಜಿಪಿಗೆ ಸೂಚನೆ ಕೊಟ್ಟಿರುವುದಾಗಿ ಮಾಧ್ಯಮದವರಿಗೆ ತಿಳಿಸಿದ್ದಾರೆ.