ಪ್ರಜಾಸ್ತ್ರ ಸುದ್ದಿ
ಕೊರಟಗೆರೆ: ಅನ್ನಭಾಗ್ಯ ಯೋಜನೆ ಅಡಿಯಲ್ಲಿ 10 ಕೆಜಿ ಅಕ್ಕಿ ಕೊಡಲು ಸಧ್ಯಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಮೂರು ತಿಂಗಳ ಕಾಲ 5 ಕೆಜಿ ಅಕ್ಕಿ ಜೊತೆಗೆ ಹಣ ನೀಡುತ್ತೇವೆ. ಅಕ್ಕಿ ಹೊಂದಿಸಿಕೊಂಡು ಮುಂದೆ ಅಕ್ಕಿ ಕೊಡುತ್ತೇವೆ ಅಂತಾ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಬಕ್ರೀದ್ ಹಬ್ಬದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಕ್ಕಿ ನೀಡುವುದು ಬಡವರ ಹಸಿವಿನ ಪ್ರಶ್ನೆ. ಇದು ಪ್ರತಿಷ್ಠೆಯಾಗಬಾರದು. ಅಕ್ಕಿ ಬದಲು ಹಣ ಕೊಡಿ ಎಂದು ಹೇಳಿದ ಬಿಜೆಪಿಯವರು, ಈಗ ಹಣ ನೀಡುತ್ತೇವೆ ಅಂದರೆ ಅದಕ್ಕೂ ವಿರೋಧ ಮಾಡುತ್ತಿದ್ದಾರೆ ಅಂತಾ ಕಿಡಿ ಕಾರಿದರು.
ಗೋದಾಮುಗಳಲ್ಲಿ ಅಕ್ಕಿ ಕೊಳೆಯುತ್ತಿದೆ. ಭಾರತ ಆಹಾರ ನಿಗಮದಲ್ಲಿ 7 ಲಕ್ಷ ಟನ್ ಅಕ್ಕಿಯಿದೆ. ಆದರೂ ಕೇಂದ್ರ ಸರ್ಕಾರ ನೀಡುತ್ತಿಲ್ಲ. ಖಾಸಗಿಯವರಿಗೆ ಕೊಡುವ ಕೇಂದ್ರ ಸರ್ಕಾರ ನಮಗೆ ಕೊಡಲು ರಾಜಕೀಯ ಮಾಡುತ್ತದೆ ಅಂತಾ ವಾಗ್ದಾಳಿ ನಡೆಸಿದರು.