ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಶನಿವಾರ ಮಧ್ಯಾಹ್ನ 12 ಗಂಟೆಯೊಳಗೆ ರಾಜ್ಯ ಚುನಾವಣೆಯ ಬಹುತೇಕ ಫಲಿತಾಂಶ ಹೊರ ಬಿದ್ದಿರುತ್ತೆ. ಹೀಗಾಗಿ ಯಾರು ಸರ್ಕಾರ ರಚನೆ ಮಾಡುತ್ತಾರೆ ಅನ್ನೋದು ಸಹ ಸ್ಪಷ್ಟವಾಗುತ್ತೆ ಎಂದು ಹೇಳಿದರೂ ಅತಂತ್ರ ಬಂದರೆ ಯಾರು ಯಾರಿಗೆ ಬೆಂಬಲ ನೀಡುತ್ತಾರೆ ಅನ್ನೋ ಲೆಕ್ಕಾಚಾರ ನಡೆದಿದೆ.
ಇನ್ನು ಕಾಂಗ್ರೆಸ್, ಬಿಜೆಪಿಯಲ್ಲಿ ಮುಖ್ಯಮಂತ್ರಿ ಯಾರಾಗಬೇಕು ಅನ್ನೋ ಚರ್ಚೆ ಭರ್ಜರಿಯಾಗಿ ನಡೆದಿದೆ. ಕಾಂಗ್ರೆಸ್ ನಲ್ಲಿ ಸಿಎಂ ರೇಸಿನಲ್ಲಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್, ಪರಮೇಶ್ವರ್, ಎಂ.ಬಿ ಪಾಟೀಲ ಇದ್ದಾರೆ. ಇದೀಗ ಪ್ರಿಯಾಂಕ್ ಖರ್ಗೆ ಹೆಸರು ಮುನ್ನೆಲೆಗೆ ಬಂದಿದೆ. ಈ ಹಿಂದೆ ಮಲ್ಲಿಕಾರ್ಜುನ್ ಖರ್ಗೆಗೆ ಸಿಎಂ ಆಗುವ ಅವಕಾಶಗಳಿದ್ದರೂ ಸಾಧ್ಯವಾಗದೆ ಹೋಗಿದ್ದು, ಅವರ ಮಗನಾದರೂ ಸಿಎಂ ಆಗಲಿ ಅನ್ನೋ ಕೂಗು ಪಕ್ಷದೊಳಗೆ ಕೇಳಿ ಬಂದಿದೆಯಂತೆ.
ಮಾಜಿ ಸಿಎಂ ಸಿದ್ದರಾಮಯ್ಯ ಸ್ವತಃ ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ. ಇವರಂತೆ ಡಿಕೆಶಿ, ಪರಮೇಶ್ವರ್, ಎಂ.ಬಿ ಪಾಟೀಲ ಸಹ ತಾವು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳು ಎಂದಿದ್ದಾರೆ. ಹೀಗಾಗಿ ಕೈ ಪಾಳೆಯದಲ್ಲಿ ಭಾರೀ ಮಾತುಕತೆ ನಡೆದಿದೆ.
ಇನ್ನು ಬಿಜೆಪಿ ಅಖಾಡದಲ್ಲಿ ಬೊಮ್ಮಾಯಿ, ಆರ್.ಅಶೋಕ್, ಮುರುಗೇಶ್ ನಿರಾಣಿ, ಯತ್ನಾಳ್ ಸೇರಿ ಕೆಲವರು ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ, ಬಿಜೆಪಿ ಹೈಕಮಾಂಡ್ ಯಾರನ್ನು ಮುಖ್ಯಮಂತ್ರಿ ಮಾಡುತ್ತೆ ಅನ್ನೋ ಕುತೂಹಲವಿದೆ. ಈ ಹಿಂದೆ ಹೆಚ್.ಡಿ ಕುಮಾರಸ್ವಾಮಿ, ಬ್ರಾಹ್ಮಣ ಸಮುದಾಯದ ನಾಯಕನ್ನು ಸಿಎಂ ಮಾಡಲು ಹೊರಟಿದೆ ಅನ್ನೋ ಮಾತು ಹೇಳಿದ್ದು, ಅದ್ಯಾರು ಅನ್ನೋ ಚರ್ಚೆ ಶುರುವಾಗಿದೆ.
ಇನ್ನು ಅತಂತ್ರ ಸ್ಥಿತಿ ನಿರ್ಮಾಣವಾದರೆ ಜೆಡಿಎಸ್ ನೊಂದಿಗೆ ಯಾರು ಕೈ ಜೋಡಿಸುತ್ತಾರೆ ಅನ್ನೋದು ಅಥವ ಕುದುರೆ ವ್ಯಾಪಾರ ನಡೆದು ಯಾರನ್ನು ಯಾರು ಹಾರಿಸಿಕೊಂಡು ಹೋಗುತ್ತಾರೆ ಅನ್ನೋ ಚದುರಂಗದಾಟ ನಡೆಯಲಿದೆ. ಹೀಗಾಗಿ ಸಿಎಂ ಸ್ಥಾನದ ಆಕಾಂಕ್ಷಿಗಳು ಎಲ್ಲದಕ್ಕೂ ಸಜ್ಜಾಗಿದ್ದಾರೆ.