ಪ್ರಜಾಸ್ತ್ರ ಸುದ್ದಿ
ಬೆಂಗಳೂರು: 2023ರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಪ್ಲಾನ್ ನಡೆದ್ಯಾ ಅನ್ನೋ ಪ್ರಶ್ನೆ ಮೂಡಿದೆ. ಯಾಕಂದ್ರೆ, ಆಡಳಿತ ಪಕ್ಷದ ನಾಯಕರು ಸಹ ಈ ಬಗ್ಗೆ ಮಾತನಾಡುತ್ತಿದ್ದಾರೆ. ಹೀಗಾಗಿ 135+1 ಶಾಸಕರ ಸರ್ಕಾರ ಬೀಳುತ್ತಾ ಅನ್ನೋ ಪ್ರಶ್ನೆ ಮೂಡಿದೆ.
ಚುನಾವಣೆ ಬಳಿಕ ಮೈತ್ರಿ ಮಾಡಿಕೊಂಡಂತೆ ನಡೆದುಕೊಳ್ಳುತ್ತಿರುವ ಬಿಜೆಪಿ ಹಾಗೂ ಜೆಡಿಎಸ್ ನಾಯಕರು, ಸರ್ಕಾರ ಕೆಡವಲು ತಂತ್ರಗಾರಿಕೆ ಮಾಡುತ್ತಿದ್ದಾರಂತೆ. ಹೆಚ್.ಡಿ ಕುಮಾರಸ್ವಾಮಿ ಸಿಂಗಾಪುರಕ್ಕೆ ಹೋಗಿ, ಅಲ್ಲಿಂದ ಸರ್ಕಾರದ ವಿರುದ್ಧ ತಂತ್ರಗಾರಿಕೆ ಮಾಡುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಕುಟುಂಬ ಸಮೇತ ಕುಮಾರಸ್ವಾಮಿ ಸಿಂಗಾಪುರಕ್ಕೆ ಹೋಗಿದ್ದು, ಇಲ್ಲಿ ಹಲವು ರೀತಿಯ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಸಚಿವ ಕೃಷ್ಣಬೈರಗೌಡ ಸಹ, ಬಿಜೆಪಿಯವರು ಸರ್ಕಾರ ಬೀಳಿಸುವುದರಲ್ಲಿ ಮುಂದು. ನಾವು ಎಚ್ಚರವಾಗಿರಬೇಕು ಅಂತಾ ಹೇಳಿದ್ದಾರೆ. ಕಾಂಗ್ರೆಸ್ ಎಂಎಲ್ಸಿ ಬಿ.ಕೆ ಹರಿಪ್ರಸಾದ್, ನನಗೆ ಸಿಎಂ ಮಾಡುವುದು ಗೊತ್ತು. ಕೆಳಗೆ ಇಳಿಸುವುದು ಗೊತ್ತು ಅನ್ನೋ ಹೇಳಿಕೆಯ ನಡುವೆ ಈ ಎಲ್ಲ ಬೆಳವಣಿಗೆಳು ನಡೆಯುತ್ತಿದ್ದು, ತೀವ್ರ ಕುತೂಹಲ ಮೂಡಿಸಿದೆ.
135 ಕಾಂಗ್ರೆಸ್ ಶಾಸಕರು, ಕಾಂಗ್ರೆಸ್ ಬೆಂಬಲಿತ ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣಯ್ಯ ಸೇರಿ 136 ಸದಸ್ಯರ ಬಲವನ್ನು ಸಿಎಂ ಸಿದ್ದರಾಮಯ್ಯ ಸರ್ಕಾರ ಹೊಂದಿದೆ. ಇನ್ನು 66 ಬಿಜೆಪಿ, 19 ಜೆಡಿಎಸ್, ಇಬ್ಬರು ಪಕ್ಷೇತರರು, ಒಬ್ಬರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಶಾಸಕರು. ಇವರೆಲ್ಲೂ ಸೇರಿದರೂ 88 ಸದಸ್ಯರಾಗುತ್ತಾರೆ. 113 ಮ್ಯಾಜಿಕ್ ನಂಬರ್ ಸಹ ಆಗುವುದಿಲ್ಲ. ಕಾಂಗ್ರೆಸ್ ಶಾಸಕರನ್ನು ಸೆಳೆದು ಸರ್ಕಾರ ಮಾಡುತ್ತೇವೆ ಅಂದರೂ ಅಸಾಧ್ಯದ ಮಾತು. ಹೀಗಿದ್ದರೂ ಸರ್ಕಾರ ಪತನದ ಲೆಕ್ಕಾಚಾರ ನಡೆದಿದೆ ಅಂದರೆ ಏನಿದರ ಮರ್ಮ ಅನ್ನೋದು ಜನರಿಗೆ ಯಕ್ಷ ಪ್ರಶ್ನೆಯಾಗಿದೆ.