ಬೆಂಗಳೂರು: ಕೇಂದ್ರದ ಕಾರ್ಮಿಕ ಕಾನೂನುಗಳನ್ನ ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಸೇರಿದಂತೆ ವಿವಿಧ ಪರ ಸಂಘಟನೆಗಳು ನೀಡಿದ್ದ ಭಾರತ್ ಬಂದ್ ಗೆ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದಲ್ಲಿ ಇದರ ಎಫೆಕ್ಟ್ ಹೆಚ್ಚು ಆಗಿಲ್ಲ. ಯಥಾಸ್ಥಿತಿಯಲ್ಲಿ ವ್ಯಾಪಾರ, ವಹಿವಾಟು, ಜನರ ಓಡಾಟ ನಡೆದಿದೆ.
ಬೆಂಗಳೂರು, ಮೈಸೂರು, ಮಂಗಳೂರು, ಚಿಕ್ಕಮಗಳೂರು, ಹುಬ್ಬಳ್ಳಿ-ಧಾರವಾಡ, ಹಾವೇರಿ, ಗದಗ, ವಿಜಯಪುರ, ಕಲಬುರಗಿ, ರಾಯಚೂರು, ಬಳ್ಳಾರಿ, ಬೀದರ ಸೇರಿದಂತೆ ಪ್ರಮುಖ ಜಿಲ್ಲೆಗಳಲ್ಲಿಯೇ ಬಂದ್ ಗೆ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನುಳಿದ ಜಿಲ್ಲೆಗಳಲ್ಲಿ ಬಂದ್ ಬಗ್ಗೆ ಗೊತ್ತೇ ಇಲ್ಲ ಅನ್ನುವಷ್ಟರ ಮಟ್ಟಿಗೆ ಯಥಾಸ್ಥಿತಿಯಿದೆ.
ಸಿಲಿಕಾನ್ ಸಿಟಿಯಲ್ಲಿ ಕಾರ್ಮಿಕ ಸಂಘಟನೆಗಳು ಮುಷ್ಕರ ನಡೆಸಲಿದ್ದು, ಒಂದಿಷ್ಟು ಸಂಚಾರ ವ್ಯತ್ಯಯವಾಗಲಿದೆ. ಇದು ಹೊರತು ಪಡಿಸಿದಂತೆ ಯಾವುದೇ ಸಮಸ್ಯೆಯಾಗದು. ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸದ ಕಾರಣ ಎಂದಿನಿಂತೆ ಶಾಲಾ, ಕಾಲೇಜುಗಳು ನಡೆಯುತ್ತಿವೆ. ಕನ್ನಡ ಪರ ಸಂಘಟನೆಗಳು ಬಿಎಂಟಿಸಿ ಬಸ್ ಚಾಲಕರಿಗೆ ಗುಲಾಬಿ ಹೂ ನೀಡಿ ನಿಮ್ಮ ಸೇವೆ ನೀವು ಮುಂದುವರೆಸಿ ಅಂತಾ ಹೇಳ್ತಿದ್ದಾರೆ.
ಇನ್ನು ಮಡಿಕೇರಿಯಿಂದ ಮೈಸೂರಿಗೆ ಹೊರಟಿದ್ದ ಸರ್ಕಾರಿ ಬಸ್ ಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಪರಿಣಾಮ ಬಸ್ಸಿನ ಗಾಜುಗಳು ಪುಡಿಪುಡಿಯಾಗಿವೆ. ಮಂಗಳೂರಿನಲ್ಲಿಯೂ ಬಂದ್ ಗೆ ನಿರಸ ಪ್ರತಿಕ್ರಿಯೆಯಿದ್ದು ಸರ್ಕಾರಿ, ಖಾಸಗಿ ಬಸ್ ಗಳು, ಆಟೋಗಳು ಸೇವೆ ನೀಡ್ತಿದ್ದು ಜನಜೀವನ ಸಹಜ ಸ್ಥಿತಿಯಲ್ಲಿದೆ.
ಇನ್ನು ದೇಶದ ಚಿತ್ರಣ ನೋಡಿದ್ರೆ ಬಿಜೆಪಿ ಸರ್ಕಾರವಿಲ್ಲದ ರಾಜ್ಯಗಳಲ್ಲಿ ಬಂದ್ ಬಿಸಿ ಜೋರಾಗಿದೆ. ಕೇರಳ, ಪಶ್ವಿಮ ಬಂಗಾಳ, ಜಾರ್ಖಂಡ್, ದೆಹಲಿ, ಬಿಹಾರ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಂದ್ ಎಫೆಕ್ಟ್ ಆಗಿದೆ.