ಪ್ರಜಾಸ್ತ್ರ ಸುದ್ದಿ
ಚಡಚಣ: ಬೈಕ್ ನಲ್ಲಿ ಬರುವಾಗ ಉಮರಾಣಿ ಬ್ಯಾರೇಜ್ ಬಳಿ ಭೀಮಾ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದ ಯುವಕನ ಶವ ಪತ್ತೆಯಾಗಿದೆ. 25 ವರ್ಷದ ರಮೇಶ ಬಸರಗಿ ಮೃತ ಯುವಕ ಎಂದು ತಿಳಿದು ಬಂದಿದೆ.
ಧೂಳಖೇಡ ಸೇತುವೆ ಕೆಳಗೆ ಶವ ಪತ್ತೆಯಾಗಿದೆ. ಹತ್ತಳ್ಳಿ ಗ್ರಾಮದ ರಮೇಶ ಬಸರಗಿ ಎಂಬಾತ ತಂದೆ ಜೊತೆ ಮಹಾರಾಷ್ಟ್ರಕ್ಕೆ ಸಂಬಂಧಿಕರ ಅಂತ್ಯಕ್ರಿಯೆಗೆ ಹೋಗಿದ್ದ. ವಾಪಸ್ ಊರಿಗೆ ಬರುತ್ತಿದ್ದಾಗ, ಉಮರಾಣಿ ಬ್ಯಾರೇಜ್ ಮೇಲೆ ನೀರಿನ ರಭಸಕ್ಕೆ ಬೈಕ್ ಸಮೇತ ಕೊಚ್ಚಿಕೊಂಡು ಹೋಗಿದ್ದ.
ಯುವಕ ರಮೇಶ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ರೂ ಚಡಚಣ ತಾಲೂಕಾಡಳಿತ ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಯುವಕನ ಪತ್ತೆಗಾಗಿ ಹತ್ತಳ್ಳಿ ಗ್ರಾಮಸ್ಥರೇ ಕೂಡಿಕೊಂಡು ಹಣ ಹೊಂದಿಸಿ ನುರಿತ ಈಜುಗಾರರನ್ನ ಕರೆದುಕೊಂಡು ಬರುವ ಮೂಲಕ ರಮೇಶ ಮೃತದೇಹ ಪತ್ತೆ ಮಾಡಿದ್ದಾರೆ.
ಬಳಿಕ ಘಟನಾ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಆರ್.ಎಸ್ ರೇವಡಿಗಾರ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ರು. ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.