ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಬಿಟ್ ಕಾಯಿನ್ ಹಗರಣದಲ್ಲಿ ಕಾಂಗ್ರೆಸ್ ನಾಯಕರ ಪಾತ್ರವಿದೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಹೋಟೆಲ್ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕನ ಮಗನ ಹೆಸರನ್ನು ಸಿ.ಟಿ ರವಿ ಪ್ರಸ್ತಾಪ ಮಾಡಿದ್ದಾರೆ. ಅದರಲ್ಲಿ ಅವರ ಪಾತ್ರವಿದ್ದರೆ ಕ್ರಮ ತೆಗೆದುಕೊಳ್ಳಲು ಸರ್ಕಾರ ಹಿಂದೇಟು ಹಾಕ್ತಿರುವುದು ಯಾಕೆ? ತಾಕತ್ತಿದ್ದರೆ ಕಾಂಗ್ರೆಸ್ ನಾಯಕನ ಮಗನನ್ನು ಬಂಧಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸವಾಲು ಹಾಕಿದ್ದಾರೆ.
ಹಗರಣದಲ್ಲಿ ಯಾರ ಹೆಸರಿದೆ. ಪೊಲೀಸರು ಯಾರನ್ನು ವಿಚಾರಣೆ ಮಾಡಿದ್ದಾರೆ. ಯಾರ ಬಗ್ಗೆ ಮಾಹಿತಿ ಸಿಕ್ಕಿದೆ. ಎಷ್ಟು ಎಫ್ಐಆರ್ ಗಳು ಆಗಿವೆ. ಪ್ರಧಾನಮಂತ್ರಿ ಕಚೇರಿ ಪತ್ರಗಳ ಮಾಹಿತಿ ಏನು ಅನ್ನೋದು ಸಾರ್ವಜನಿಕವಾಗಿ ಬಹಿರಂಗಪಡಿಸಿ. ಈ ಹಗರಣದಲ್ಲಿ ಯಾರೇ ತಪ್ಪು ಮಾಡಿದರೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಿ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.