ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಸೋತ ಬಿಜೆಪಿಗೆ ಆಂತರಿಕ ಜೊತೆಗೆ ಬಹಿರಂಗ ಸಂಕಷ್ಟಗಳು ಹೆಚ್ಚಾಗುತ್ತಿವೆ. ಇದನ್ನು ಮೆಟ್ಟಿ ನಿಲ್ಲಲು ಕಮಲ ನಾಯಕರು ಪ್ಲಾನ್ ಮಾಡುತ್ತಿದ್ದಾರೆ. ಬಿಜೆಪಿ ಹಾಲಿ, ಮಾಜಿ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಅನ್ನೋ ಕೈ ನಾಯಕರ ದಾಳಕ್ಕೆ ಬಿಜೆಪಿ ಪಡೆ ಟೆನ್ಷನ್ ಮಾಡಿಕೊಂಡಿದೆ. ಇದೀಗ ಕೈ ಪಡೆಗೆ ಠಕ್ಕರ್ ಕೊಡಲು ಮಾಜಿ ಸಿಎಂ ಯಡಿಯೂರಪ್ಪ ಸಿದ್ಧತೆ ನಡೆಸಿದ್ದಾರೆ.
ಬಿಜೆಪಿ ಹಿರಿಯ ನಾಯಕರು, ಶಾಸಕರು ಸೇರಿ ಬಿಎಸ್ವೈ ಮನೆಯಲ್ಲಿ ಸಭೆ ನಡೆಸಿದ್ದಾರೆ. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ರಣತಂತ್ರ ರೂಪಿಸಲಾಗಿದ್ದು, ಆಗಸ್ಟ್ 23ರಂದು ಬೃಹತ್ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದು, ಅಂದು ಐದಾರು ಸಾವಿರ ಜನರನ್ನು ಸೇರಿಸಲು ಮುಂದಾಗಿದೆ.
ವರ್ಗಾವಣೆ ದಂಧೆ ನಡೆಸಿದೆ, ಭ್ರಷ್ಟಾಚಾರದಲ್ಲಿ ಮುಳುಗಿದೆ. ಅಭಿವೃದ್ಧಿ ವಿಷಯದಲ್ಲಿ ಹಿಂದೆ ಬಿದ್ದಿದೆ. ಅನುದಾನಗಳ ಕೊರತೆ ಇದೆ. ಹೀಗೆ ಹಲವು ವಿಚಾರಗಳನ್ನಿಟ್ಟುಕೊಂಡು ಪ್ರತಿಭಟನೆ ನಡೆಸಲು ಸಭೆಯಲ್ಲಿ ಚರ್ಚಿಸಲಾಗಿದೆ. ಬಿಜೆಪಿ ನಾಯಕರು ಡಿಸಿಎಂ ಡಿ.ಕೆ ಶಿವಕುಮಾರ್ ಮೇಲೆ ನಿರಂತರ ವಾಗ್ದಾಳಿ ನಡೆಸಿದ್ದು, ಇದರ ಹಿಂದಿನ ಪ್ಲಾನ್ ಏನು ಅನ್ನೋ ಕುತೂಹಲ ಮೂಡಿದೆ.