ಪ್ರಜಾಸ್ತ್ರ ಸುದ್ದಿ
ಹಾವೇರಿ: ಇಂದಿನ ಆಧುನಿಕ ಜೀವನದಲ್ಲಿಯೂ ಮಾಟ, ಮಂತ್ರ, ವಾಮಾಚಾರದಂತಹ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಈ ಬಗ್ಗೆ ಎಷ್ಟೇ ತಿಳುವಳಿಕೆ ನೀಡಿದರೂ ಇಂದಿಗೂ ನಿಂತಿಲ್ಲ ಎನ್ನುವುದಕ್ಕೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ಜೋಗಚಿಕೊಪ್ಪ ಗ್ರಾಮದ ಸ್ಮಶಾನದಲ್ಲಿ ನಡೆದ ಘಟನೆಯೇ ಸಾಕ್ಷಿ.
ಗ್ರಾಮದಲ್ಲಿನ ಸ್ಮಶಾನದಲ್ಲಿ ಬೆತ್ತಲಾದ ಮಹಿಳೆ ಹಾಗೂ ಮೂವರು ಪುರುಷರು ಸೇರಿಕೊಂಡು ಮೂವರು ಹುಡುಗಿಯರ ಫೋಟೋ ಇಟ್ಟು ಅದರ ಸುತ್ತಲು ನಿಂಬೆಹಣ್ಣು ಇಟ್ಟು ವಾಮಾಚಾರ ಮಾಡಿದ್ದಾರೆ. ಇನ್ನು ಮನುಷ್ಯನ ಬುರುಡೆ ಮೇಲೆ ವ್ಯಕ್ತಿಯೊಬ್ಬನ ಹೆಸರು ಬರೆದು ಕೋಳಿ ರಕ್ತದಲ್ಲಿ ಪೂಜೆ ಮಾಡಿರುವುದು ಕಂಡು ಬಂದಿದೆ.
ಈ ತಂಡ ಅಮವಾಸ್ಯೆ ದಿನದಿಂದಲೇ ಪೂಜೆ ಮಾಡುತ್ತಿದೆ. ಆದರೆ, ಯಾರಿಗೂ ಅಷ್ಟಾಗಿ ತಿಳಿದು ಬಂದಿಲ್ಲ. ಒಂದು ದಿನ ಕೇಳಿದಾಗ ನಾವು ಮೀನು ಹಿಡಿಯುವವರು ಎಂದು ಹೇಳಿಕೊಂಡಿದ್ದಾರಂತೆ. ಸೋಮವಾರ ತಡರಾತ್ರಿ ಗ್ರಾಮಸ್ಥರು ಸ್ಮಶಾನಕ್ಕೆ ಹೋದಾಗ ವಾಮಾಚಾರ ಮಾಡುತ್ತಿರುವುದು ಕಂಡು ಬಂದಿದೆ. ಈ ವೇಳೆ ಮೂವರು ಪರಾರಿಯಾಗಿದ್ದು, ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ಹುಡುಗಿಯರ ವಶೀಕರಣಕ್ಕಾಗಿ ನಡೆದ ವಾಮಾಚಾರ ಎಂದು ಹೇಳಲಾಗುತ್ತಿದ್ದು, ಈ ಕುರಿತು ಪೊಲೀಸರು ತನಿಖೆ ನಡೆಸಿದ್ದಾರೆ.