ಸಿಂದಗಿ: ಸಿಂದಗಿ ಪಟ್ಟಣವನ್ನ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿ ಸೇರಿ ಹಾಳು ಮಾಡಿವೆ ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಎಂ ಕೃಷ್ಣಮೂರ್ತಿ ಆರೋಪಿಸಿದ್ದಾರೆ. ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತ್ನಾಡಿದ ಅವರು, 40ಕ್ಕೂ ಹೆಚ್ಚು ವರ್ಷಗಳಿಂದ ಕಾಂಗ್ರೆಸ್, ಜೆಡಿಎಸ್ ಅಧಿಕಾರ ಮಾಡಿಕೊಂಡು ಬಂದ್ರೂ ಮಾದರಿ ತಾಲೂಕು ಮಾಡಲು ಆಗ್ಲಿಲ್ಲವೆಂದು ವಾಗ್ದಾಳಿ ನಡೆಸಿದ್ರು.
23 ವಾರ್ಡ್ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ, ರಸ್ತೆ ಸರಿಯಾಗಿಲ್ಲ, ಒಳ ಚರಂಡಿ ನಿರ್ಮಿಸಿಲ್ಲ, ಮಾರುಕಟ್ಟೆ ವ್ಯವಸ್ಥೆಯಿಲ್ಲ, ಸ್ಥಳೀಯರಿಗೆ ನಿವೇಶನ ಕೊಡುವ ಕೆಲಸವಾಗಿಲ್ಲ, ಕೇಂದ್ರದ ಯೋಜನೆಗಳಿಂದ ಯುವಕರಿಗೆ ಕೌಶಲ್ಯ ಅಭಿವೃದ್ಧಿ ಕೆಲಸಗಳನ್ನ ಕೊಡಿಸುವಲ್ಲಿ ಮೂರು ಪಕ್ಷಗಳು ಸಿಂದಗಿ ಜನತೆಗೆ ಅನ್ಯಾಯ ಮಾಡಿವೆ ಅಂತಾ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ವಿರುದ್ಧ ಕಿಡಿ ಕಾರಿದ್ರು.
ಮೊದಲ ಬಾರಿಗೆ ಬಿಸ್ಪಿ 6 ವಾರ್ಡ್ ಗಳಲ್ಲಿ ಸ್ಪರ್ಧೆ ಮಾಡ್ತಿದೆ. ಯಾವುದೇ ಪಕ್ಷದೊಂದಿಗೆ ರಾಜಿ ಸಂಧಾನ ಮಾಡಿಕೊಳ್ಳದೆ ಒಂದು ಪ್ರಯೋಗ ಮಾಡಲಾಗಿದೆ. ಶುದ್ಧ ವ್ಯಕ್ತಿಗಳಿಗೆ ಟಿಕೆಟ್ ನೀಡಿ ಚುನಾವಣೆ ಎದುರಿಸ್ತಿದ್ದೇವೆ. ಜನಪರ ಕಾಳಜಿ ಹೊಂದಿರುವ ನಮ್ಮ ಪಕ್ಷ ಸಿಂದಗಿ ಅಭಿವೃದ್ಧಿ ವಿಚಾರದಲ್ಲಿ 24 ಗಂಟೆಯೂ ನಮ್ಮವರು ಕೆಲಸ ಮಾಡ್ತಾರೆ. ಹೀಗಾಗಿ ಹೊಸ ಮುಖಗಳಿಗೆ ಜನರು ಆಶೀರ್ವಾದ ಮಾಡ್ತಾರೆ ಅನ್ನೋ ವಿಶ್ವಾಸವಿದೆ ಅಂತಾ ಹೇಳಿದ್ರು.
ಈ ವೇಳೆ ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಕೆ.ಬಿ ವಾಸು, ಕಲಬುರಗಿ ಉಸ್ತುವಾರಿ ದನ್ನಿ ಮಹಾದೇವ, ಬೆಳಗಾವಿ ಉಸ್ತುವಾರಿ ರಾಜು ಗುಬ್ಬೇವಾಡ, ಜಿಲ್ಲಾಧ್ಯಕ್ಷ ಅಕ್ಬರ ಮುಲ್ಲಾ, ಪಕ್ಷದ ಮುಖಂಡರಾದ ಸದಾಶಿವ ಕುಬಕಡ್ಡಿ, ಕಲ್ಮಡಿ ಉಪಸ್ಥಿತರಿದ್ರು. ಯಶವಂತ ಪೂಜಾರಿ ಸ್ವಾಗತಿಸಿದ್ರು. ಹರ್ಷವರ್ಧನ ಪೂಜಾರಿ ವಂದಿಸಿದ್ರು.