ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ 2 ಲಕ್ಷದ 37 ಸಾವಿರ ಕೋಟಿ ರೂಪಾಯಿಯ ಬಜೆಟ್ ಮಂಡಿಸಿದ್ದಾರೆ. ಕೃಷಿ, ಆರೋಗ್ಯ, ಶಿಕ್ಷಣ, ಗ್ರಾಮೀಣ, ನಗರ, ಕೈಗಾರಿಕೆ, ಉದ್ಯಮ, ಕಾರ್ಮಿಕ ವಲಯ ಸೇರಿದಂತೆ 14ಕ್ಕೂ ಹೆಚ್ಚು ಇಲಾಖೆಗಳ ಕುರಿತ ಬಜೆಟ್ ಮಂಡಿಸಿದ್ದಾರೆ.
ಸಿಎಂ ಮಂಡಿಸಿದ 2020-21ನೇ ಸಾಲಿನ ಬಜೆಟ್ ಬಗ್ಗೆ ವಿಪಕ್ಷಗಳ ನಾಯಕರು ಏನು ಹೇಳಿದ್ದಾರೆ ಅನ್ನೋದು ಇಲ್ಲಿದೆ.
ಇದೊಂದು ನಿರಸ ಬಜೆಟ್ ಆಗಿದೆ. ಬಿಜೆಟ್ ನಲ್ಲಿ ಅನುದಾನ ನೀಡಲು ಸಂಪನ್ಮೂಲದ ಕೊರತೆಯಿದೆ. ಯಾಕಂದ್ರೆ, ರಾಜ್ಯದಲ್ಲಿ ಜಿಡಿಪಿ ಕುಸಿದಿದೆ. ಹೀಗಾಗಿ ಇದೊಂದು ಕಳಪೆ ಬಜೆಟ್ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಜೆಟ್ ನಲ್ಲಿ ಯಾವುದೇ ಸತ್ವವಿಲ್ಲ. ಹಳೆಯ ಯೋಜನೆಗಳನ್ನ ಹೊರತು ಪಡಿಸಿ ಹೊಸ ಯೋಜನೆಗಳೇ ಇಲ್ಲ. ಕೇಂದ್ರದಿಂದ ನ್ಯಾಯಯುತವಾಗಿ ರಾಜ್ಯಕ್ಕೆ ಸಿಗಬೇಕಾದ ಹಣ ಸಿಕ್ಕಿಲ್ಲ. ಇದನ್ನ ಪ್ರಶ್ನೆ ಮಾಡುವ ಧೈರ್ಯ ಯಾವ ಬಿಜೆಪಿ ನಾಯಕನಿಗೂ ಇಲ್ಲವೆಂದು ಮಾಜಿ ಸಚಿವ ಎಂ.ಬಿ ಪಾಟೀಲ ಹೇಳಿದ್ದಾರೆ.
ಬಿ.ಎಸ್ ಯಡಿಯೂರಪ್ಪ ಮಂಡಿಸಿದ ಬಜೆಟ್ ನಲ್ಲಿ ಖಾರಾನೂ ಇಲ್ಲ. ಶಕ್ತಿನೂ ಇಲ್ಲವೆಂದು ಮಾಜಿ ಸಚಿವ ಡಿ.ಕೆ ಶಿವಕುಮಾರ ಹೇಳಿದ್ದು, ಇದೊಂದು ದುರ್ಬಲ ಬಜೆಟ್. ರಾಜ್ಯಕ್ಕೂ ಶಕ್ತಿ ಕೊಡಲಿಲ್ಲ. ಜನರಿಗೂ ಶಕ್ತಿ ಕೊಡಲಿಲ್ಲವೆಂದು ಟೀಕಿಸಿದ್ದಾರೆ.
ಇನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ಬಿಎಸ್ವೈ ಬಜೆಟ್ ಶೂನ್ಯವೆಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಕೇವಲ ಹೆಸರಿನ ಬದಲಾವಣೆಯಿಂದ ನಮ್ಮ ಭಾಗದ ಜನರ ಭವಿಷ್ಯ ಬದಲಾಗುವುದಿಲ್ಲ. ಬಿಜೆಪಿ ಈ ಮೊದಲು 371 ಜೆ ಅನ್ನು ತಿರಸ್ಕರಿಸಿತ್ತು. ಈಗ ಬಜೆಟ್ ನಲ್ಲಿಯೂ ಈ ಭಾಗವನ್ನ ಕಡೆಗಣಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.